ಕೊಪ್ಪಳ: ಅನುಮಾನದ ಭೂತ ತಲೆಗೆ ಹೊಕ್ಕ ಗಂಡ ಸಿಮ್ ಕಿತ್ತುಕೊಂಡಿದ್ದಕ್ಕೆ ಹೆಂಡತಿ ಪತಿಯನ್ನೇ ಕೊಂದು ಹಾಕಿದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿಯ ನಿಲೋಗಲ್ ನಲ್ಲಿ ನಡೆದಿದೆ. ಸಿದ್ಧಲಿಂಗಪ್ಪ ಮೃತಪಟ್ಟ ದುರ್ದೈವಿ.
ಸುಮಾರು ಐದಾರು ವರ್ಷದಿಂದ ಯಲಬುರ್ಗದ ಮಂಡಲಮರಿ ಕ್ರಾಸ್ನಲ್ಲಿ ಹೋಟೆಲ್ ಹಾಕಿದ್ದು, ದಂಪತಿ ಒಟ್ಟಿಗೆ ದುಡಿಯುತ್ತಿದ್ದರು. ಆದರೆ ಈ ನಡುವೆ ಸಿದ್ದಲಿಂಗಪ್ಪಗೆ ಶಿಲ್ಪಾ ಮೇಲೆ ಸಂಶಯದ ಭೂತ ಹೊಕ್ಕಿತ್ತು.
ಸಿದ್ದಲಿಂಗಪ್ಪ ಶಿಲ್ಪಾಳನ್ನು 2ನೇ ವಿವಾಹವಾಗಿದ್ದರು. ಶಿಲ್ಪಾ ವ್ಯಕ್ತಿಯೊಬ್ಬನ ಜತೆ ಸಲುಗೆಯಿಂದ ಇದ್ದು, ಆತನೊಟ್ಟಿಗೆ ಮಾತನಾಡುತ್ತಿದ್ದಳು. ಈ ವಿಷಯವಾಗಿ ಸಿದ್ದಲಿಂಗಪ್ಪ ಶಿಲ್ಪಾಳನ್ನು ಅನುಮಾನದಿಂದ ನೋಡುತ್ತಿದ್ದ.
ಏಪ್ರಿಲ್ 12 ರಂದು ರಾತ್ರಿ ಇಬ್ಬರ ನಡುವೆ ಗಲಾಟೆ ಅತಿರೇಕಕ್ಕೆ ಏರಿದ್ದು ಸಿದ್ದಲಿಂಗಪ್ಪ ಮಲಗಿದ್ದಾಗ ಎಳನೀರು ಕೊಚ್ಚುವ ಮಚ್ಚಿನಿಂದ ಕೊಚ್ಚಿ ಕೊಂದು ಏನೂ ತಿಳಿಯದಂತೆ ನಾಟಕವಾಡುತ್ತಿದ್ದಳು. ಕೆಲ ವರ್ಷದ ಹಿಂದೆ ಸಿದ್ದಲಿಂಗಪ್ಪ ಗ್ರಾಮದ ಕೆಲವರ ಜತೆ ಜಗಳ ಮಾಡ್ಕೊಂಡಿದ್ದ. ಹೀಗಾಗಿ, ಅವರೇ ಯಾರೋ ಕೊಂದಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು.
ಪೊಲೀಸರು ಕೂಡ ಸಂಶಯದ ಮೇಲೆ ಏಪ್ರಿಲ್ 13 ರಂದು ಕೆಲವರನ್ನು ಕರೆತಂದು ವಿಚಾರಣೆ ನಡೆಸಿದರೂ, ಏನೊಂದು ಗೊತ್ತಾಗಲಿಲ್ಲ. ಕೊನೆಗೆ, ಶಿಲ್ಪಾಳನ್ನು ಮತ್ತೊಮ್ಮೆ ವಿಚಾರಣೆ ಮಾಡಿದಾಗ, ಸತ್ಯ ಒಪ್ಪಿ ಕೊಂಡಿದ್ದಾಳೆ. ಗಲಾಟೆ ನಂತರ ಸಿದ್ದಲಿಂಗಪ್ಪ, ಶಿಲ್ಪಾಳ ಮೊಬೈಲ್ ಕಸಿದು ಸಿಮ್ ತೆಗೆದುಕೊಂಡಿದ್ದು ಇದರಿಂದ ರೊಚ್ಚಿ ಗೆದ್ದ ಶಿಲ್ಪಾ, ಮಚ್ಚಿನಿಂದ ಕೊಚ್ಚಿ ಪತಿಯನ್ನ ಕೊಂದಿದ್ದಾಳೆ. ಒಟ್ನ ಲ್ಲಿ, ಸಿಮ್ ಕಸಿದುಕೊಂಡ ಅಂತ ಗಂಡನ ಜೀವ ತೆಗೆದು ಜೈಲು ಪಾಲಾಗಿದ್ದಾಳೆ. ಮಗನನ್ನು ಕಳೆದುಕೊಂಡ ಸಿದ್ಧಲಿಂಗಪ್ಪನವರ ಪೋಷಕ ವೃದ್ಧ ದಂಪತಿಗಳು ಕಂಗಾಲಾಗಿವೆ. ಪುಟಾಣಿ ಮಕ್ಕಳು ಅನಾಥರಾಗಿದ್ದಾರೆ.