ಬಂಟ್ವಾಳ: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಹಿಂಬಾಗಿಲು ಒಡೆದು ದರೋಡೆಗೆ ವಿಫಲ ಯತ್ನ ನಡೆಸಿದ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ವಿದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಜ್ಜಿನಡ್ಕ ನಿವಾಸಿ ಮಹಮ್ಮದ್ ಅಲಿ ಮಣಿಲ ಅವರಿಗೆ ಸೇರಿದ ಮನೆಯ ಹಿಂಬದಿಯ ಬಾಗಿಲನ್ನು ಪಿಕ್ಕಾಸು ಬಳಸಿ ಮುರಿದಿದ್ದು, ಇಬ್ಬರು ಮನೆಯ ಒಳಗೆ ಹೋಗಿ ದರೋಡೆಗೆ ಯತ್ನಿಸಿದ್ದಾರೆ. ಮನೆಯಲ್ಲಿ ವಾಸವಿರುವ ಮಹಮ್ಮದ್ ಅಲಿ ಅವರ ತಾಯಿ, ಪತ್ನಿ ಹಾಗೂ ಮಕ್ಕಳು ಮನೆಯಲ್ಲಿ ಇಲ್ಲದ ಸಂದರ್ಭವನ್ನು ಗಮನಿಸಿಕೊಂಡು ಈ ಕೃತ್ಯವನ್ನು ಮಾಡಿದ್ದಾರೆ.
ಐಷಾರಾಮಿ ಮನೆಯಲ್ಲಿರುವ ಸಿಸಿಕ್ಯಾಮರಾ ವಿದೇಶದಲ್ಲಿರುವ ಮನೆ ಮಾಲಿಕ ಅಲಿ ಅವರ ದೂರವಾಣಿಗೆ ಸಂಪರ್ಕ ವಿದ್ದು, ಇದನ್ನು ಗಮನಿಸುವ ಸಂದರ್ಭ ಎರಡು ಸಿಸಿ ಕ್ಯಾಮರಾಗಳು ಆಕಾಶದ ಕಡೆಗೆ ಮುಖ ಮಾಡಿರುವುದು ಕಾಣಿಸಿದ್ದರಿಂದ ಮನೆ ಮಂದಿಯಲ್ಲಿ ವಿಚಾರಿಸಿದ್ದಾರೆ. ಮನೆಯಿಂದ ಹೊರಗಿದ್ದವರು ಮನೆಗೆ ಬಂದು ಪರಿಶೀಲನೆ ನಡೆಸಿದ ಸಂದರ್ಭ ಈ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.
ಫೆ.27ರ ಬೆಳಗ್ಗಿನ ಜಾವ 1ರಿಂದ 2 ಗಂಟೆ ನಡುವಿನಲ್ಲಿ ಇಬ್ಬರು ಮನೆಯ ಒಳಗೆ ಬಂದು ಪರಿಶೀಲನೆ ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ದಾಖಲೀಕರಣವಾಗಿದೆ. ಮನೆ ಮಾಲೀಕರ ಸಹೋದರ ಮಹಮ್ಮದ್ ಸಿರಾಜ್ ನೀಡಿದ ದೂರಿನ ಪ್ರಕಾರ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.