ನವದೆಹಲಿ: ಕಾಮನ್ವೆಲ್ತ್ ಕ್ರೀಡಾಕೂಟ-2022ರ ಹಿನ್ನೆಲೆಯಲ್ಲಿ ಇಂದು ಭಾರತೀಯ ಆಟಗಾರರ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದಾರೆ. ಈ ವೇಳೆ ಕಾಮನ್ವೆಲ್ತ್ ಗೇಮ್ಸ್ 2022ರ ಕ್ರೀಡಾಪಟುಗಳು ನಿರೀಕ್ಷೆಗಳನ್ನು ಪಕ್ಕಕ್ಕಿಟ್ಟು ಬರ್ಮಿಂಗ್ಹ್ಯಾಮ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವತ್ತ ಗಮನಹರಿಸುವಂತೆ ಸಲಹೆ ನೀಡಿದ್ದಾರೆ. 3000 ಮೀಟರ್ ಸ್ಟೀಪಲ್ಚೇಸರ್ ಅವಿನಾಶ್ ಸೇಬಲ್, ವೇಟ್ಲಿಫ್ಟರ್ ಅಚಿಂತಾ ಶೆಯುಲಿ, ಮಹಿಳಾ ಹಾಕಿ ಆಟಗಾರ್ತಿ ಸಲೀಮಾ ಟೆಟೆ, ಸೈಕ್ಲಿಸ್ಟ್ ಡೇವಿಡ್ ಬೆಕ್ಹ್ಯಾಮ್ ಮತ್ತು ಪ್ಯಾರಾ ಶಾಟ್ ಪಟರ್ ಶರ್ಮಿಳಾ ಅವರೊಂದಿಗೆ ಪ್ರಧಾನಿ ಮೋದಿ ವಿಡಿಯೋ ಸಂವಾದ ನಡೆಸಿದ್ದಾರೆ.
‘ನಾನು 2012ರಲ್ಲಿ ಭಾರತೀಯ ಸೇನೆಗೆ ಸೇರಿಕೊಂಡೆ. ಅದರ ನಂತರ ನಾನು ಅಥ್ಲೆಟಿಕ್ಸ್ ಆಯ್ಕೆ ಮಾಡಿಕೊಂಡೆ. ಕಠಿಣ ಸೇನಾ ತರಬೇತಿ ಮತ್ತು ಕಠಿಣ ಸಿಯಾಚಿನ್ ಗ್ಲೇಸಿಯರ್ ಪೋಸ್ಟಿಂಗ್ ಕ್ರೀಡಾ ಸ್ಪರ್ಧೆಗಳ ಸಮಯದಲ್ಲಿ ನನಗೆ ಸಾಕಷ್ಟು ಸಹಾಯ ಮಾಡಿದೆ’ ಎಂದು ಅವಿನಾಶ್ ಸೇಬಲ್ ಹೇಳಿದ್ದಾರೆ.
ಇಂದಿನ ಈ ಅವಧಿ ಭಾರತೀಯ ಕ್ರೀಡಾ ಇತಿಹಾಸದಲ್ಲಿ ಅತ್ಯಂತ ಮಹತ್ವದ ಕಾಲವಾಗಿದೆ. ಇಂದು ನಿಮ್ಮಂತಹ ಆಟಗಾರರ ಉತ್ಸಾಹವೂ ಹೆಚ್ಚಾಗಿದೆ, ತರಬೇತಿಯೂ ಉತ್ತಮವಾಗುತ್ತಿದೆ. ಇಂದು ಇರುವ ಅನೇಕ ಕ್ರೀಡಾಪಟುಗಳು ಈಗಾಗಲೇ ಇತರ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಆದರೆ ತಮ್ಮ ಚೊಚ್ಚಲ ಸಾಹಸಕ್ಕೆ ಹೋಗುವ ಕ್ರೀಡಾಪಟುಗಳಿಗೆ ನಾನು ವಿಶೇಷವಾದ ಶುಭ ಹಾರೈಸುತ್ತೇನೆ. ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಮೊದಲ ಬಾರಿಗೆ ಭಾಗವಹಿಸಲಿರುವ 65 ಕ್ರೀಡಾಪಟುಗಳು ಕ್ರೀಡಾ ಜಗತ್ತಿನಲ್ಲಿ ಶಾಶ್ವತವಾದ ಛಾಪು ಮೂಡಿಸುತ್ತಾರೆಂದು ನನಗೆ ಭರವಸೆಯಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತ ಆತಿಥ್ಯ ವಹಿಸಲಿರುವ 44ನೇ ಚೆಸ್ ಒಲಿಂಪಿಯಾಡ್ ಕೂಡ ಜುಲೈ 28ರಂದು ಕಾಮನ್ವೆಲ್ತ್ ಗೇಮ್ಸ್ನೊಂದಿಗೆ ಆರಂಭವಾಗಲಿದ್ದು, ಮುಂದಿನ ಕೆಲವು ದಿನಗಳ ಕಾಲ ಭಾರತದ ಕ್ರೀಡಾಪಟುಗಳು ವಿಶ್ವದ ಮುಂದೆ ಮಿಂಚಲು ಅವಕಾಶವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ಯೋಗವು ನನ್ನ ಮೆದುಳು ಶಾಂತವಾಗಿರಲು ಸಹಾಯ ಮಾಡುತ್ತದೆ. ನಾನು ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತೇನೆ” ಎಂದು ಕ್ರೀಡಾಪಟು ಅಚಿಂತಾ ಶೆಯುಲಿ ಪ್ರಧಾನಿ ಮೋದಿ ಅವರೊಂದಿಗೆ ಕಾಮನ್ವೆಲ್ತ್ ಗೇಮ್ಸ್ಗೆ ತಮ್ಮ ಸಿದ್ಧತೆ ಯಾವ ರೀತಿ ಇದೆ ಎಂದು ಬಗ್ಗೆ ಹಂಚಿಕೊಂಡರು. ಹಾಗೇ, ಮೋದಿಯವರೊಂದಿಗೆ ತಮ್ಮ ಸಿನಿಮಾ ಪ್ರೀತಿಯ ಬಗ್ಗೆಯೂ ಮಾತನಾಡಿದ ಅವರು ತಮ್ಮ ಬಿಡುವಿನ ವೇಳೆಯಲ್ಲಿ ಕೆಲವು ಉತ್ತಮ ಚಲನಚಿತ್ರಗಳನ್ನು ನೋಡಲು ಇಷ್ಟಪಡುವುದಾಗಿ ಹೇಳಿದರು.
ಕಣ್ಣೂರಿನ ಬ್ಯಾಡ್ಮಿಂಟನ್ ಆಟಗಾರ್ತಿ ಟ್ರೀಸಾ ಜಾಲಿ ಕೂಡ ತನ್ನ ತಂದೆ ತನ್ನನ್ನು ಬ್ಯಾಡ್ಮಿಂಟನ್ ಆಡಲು ಹೇಗೆ ಪ್ರೇರೇಪಿಸಿದರು ಎಂಬುದನ್ನು ಪ್ರಧಾನಿ ಮೋದಿ ಅವರೊಂದಿಗೆ ಹಂಚಿಕೊಂಡಿದ್ದಾರೆ. ‘ನನ್ನ ಊರಿನಲ್ಲಿ ವಾಲಿಬಾಲ್ ಮತ್ತು ಫುಟ್ಬಾಲ್ ಹೆಚ್ಚು ಜನಪ್ರಿಯವಾಗಿದ್ದರೂ ನನ್ನ ತಂದೆ ನನಗೆ ಬ್ಯಾಡ್ಮಿಂಟನ್ ಆಡಲು ನನ್ನನ್ನು ಪ್ರೇರೇಪಿಸಿದರು. ಅವರಿಂದಲೇ ನಾನು ಇಂದು ಈ ಮಟ್ಟದಲ್ಲಿದ್ದೇನೆ’ ಎಂದು ಹೇಳಿದರು.
ಸಂವಾದದಲ್ಲಿ ಒಲಿಂಪಿಕ್ ಡಬಲ್ ಪದಕ ವಿಜೇತೆ ಪಿವಿ ಸಿಂಧು, ಮಹಿಳಾ ಹಾಕಿ ಗೋಲ್ಕೀಪರ್ ಸವಿತಾ ಪುನಿಯಾ, ರಿಯೋ ಗೇಮ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಬಾಕ್ಸರ್ಗಳಾದ ಶಿವ ಥಾಪಾ ಮತ್ತು ಸುಮಿತ್, ಶಟ್ಲರ್ಗಳಾದ ಕಿದಂಬಿ ಶ್ರೀಕಾಂತ್ ಮತ್ತು ಲಕ್ಷ್ಯ ಸೆಂಟ್ ಮುಂತಾದವರು ಭಾಗವಹಿಸಿದ್ದರು.
ಬರ್ಮಿಂಗ್ಹ್ಯಾಮ್ನಲ್ಲಿ ಜುಲೈ 28ರಿಂದ ಆಗಸ್ಟ್ 8ರವರೆಗೆ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ಒಟ್ಟು 215 ಭಾರತೀಯ ಅಥ್ಲೀಟ್ಗಳು 19 ಕ್ರೀಡಾ ವಿಭಾಗಗಳಲ್ಲಿ 141 ಈವೆಂಟ್ಗಳಲ್ಲಿ ಭಾಗವಹಿಸಲಿದ್ದಾರೆ. ಈ ಸ್ಪರ್ಧಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದರು. ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.