ದಕ್ಷಿಣಕನ್ನಡ: ಜಿಲ್ಲೆಯಲ್ಲಿ ನಡೆದ ದ್ವಿತೀಯ ಪಿಯು ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಮಕ್ಕಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆ ನೀಡಿದ ಇತಿಹಾಸ ಪ್ರಶ್ನೆಪತ್ರಿಕೆಯ ಭಾರತದ ಭೂಪಟದಲ್ಲಿ ಅರ್ಧ ಕಾಶ್ಮೀರವೇ ಮಾಯವಾಗಿದೆ. ವಿದ್ಯಾರ್ಥಿಗಳಿಗೆ ಒದಗಿಸಿದ ಭಾರತದ ಭೂಪಟದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಕೈಬಿಡಲಾಗಿದೆ. ಸಾಮಾನ್ಯವಾಗಿ ಪ್ರತಿವರ್ಷ ಪಿಯು ಇತಿಹಾಸ ವಿಭಾಗದ ಉಪನ್ಯಾಸಕರ ಸಂಘದ ಮೇಲುಸ್ತುವಾರಿಯಲ್ಲೇ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸಿದ್ಧವಾಗುತ್ತದೆ.
ಆದರೆ ಈ ವರ್ಷ ಪಿಯು ಮಂಡಳಿ ಸೂಚನೆಯಂತೆ ಪ್ರಶ್ನೆಪತ್ರಿಕೆ ಜವಾಬ್ದಾರಿಯನ್ನು ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಸಂಘಕ್ಕೆ ವಹಿಸಲಾಗಿತ್ತು. ಕೇವಲ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಾತ್ರ ಈ ರೀತಿಯ ಪ್ರಮಾದವಾಗಿದ್ದು, ರಾಜ್ಯದ ಉಳಿದ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾದ ಪ್ರಶ್ನೆಪತ್ರಿಕೆಯಲ್ಲಿ ಭಾರತದ ನಕ್ಷೆಯನ್ನು ಪೂರ್ಣ ಕಾಶ್ಮೀರದ ಜೊತೆಗೇ ಪ್ರಕಟಿಸಲಾಗಿತ್ತು.
ಶಿಕ್ಷಣ ಇಲಾಖೆಯ ಈ ಬೇಜಾವಬ್ದಾರಿಯ ನಡೆಯನ್ನು ಕಾಲೇಜುಗಳ ಹಂತದಲ್ಲೇ ಮುಚ್ಚುವ ಪ್ರಯತ್ನಗಳು ಕೂಡಾ ನಡೆದಿದ್ದು, ಆದರೆ ಈ ವಿಚಾರ ಇದೀಗ ಬಹಿರಂಗವಾಗುತ್ತಿದ್ದಂತೆ ಇಲಾಖಾ ಅಧಿಕಾರಿಗಳು ಪ್ರಮಾದದ ಬಗ್ಗೆ ತನಿಖೆಗೆ ತೀರ್ಮಾನಿಸಿದ್ದಾರೆ. ದೇಶದ ಬಗ್ಗೆ ಅಗೌರವ ತೋರಿದ ಹಾಗೂ ಭೂಪಟವನ್ನು ತಿರುಚಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಗೊಂದಲಗಳನ್ನು ಸೃಷ್ಟಿಸಿದ ದಕ್ಷಿಣಕನ್ನಡ ಜಿಲ್ಲಾ ಪದವಿ ಪೂರ್ವ ಉಪನ್ಯಾಸಕರ ಸಂಘದ ವಿರುದ್ಧ ಹಾಗೂ ನಕ್ಷೆಯನ್ನು ಯಾವುದೇ ರೀತಿಯಲ್ಲೂ ಮರುಪರಿಶೀಲನೆ ನಡೆಸದೆ ವಿದ್ಯಾರ್ಥಿಗಳಿಗೆ ನೀಡಿದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲೂ ಹಿಂದೂಪರ ಸಂಘಟನೆ ಹಾಗೂ ಎಬಿವಿಪಿ ವಿದ್ಯಾರ್ಥಿ ಸಂಘಟನೆ ತೀರ್ಮಾನಿಸಿದೆ.