ಕಲಬುರಗಿ: ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಘಟನೆ ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ನಡೆದಿದೆ. ಮಹಿಳೆಯ ಕತ್ತುಹಿಸುಕಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಮಹಾನಂದ ರಾಜು ಅಟ್ಟದಮನಿ (22) ಮೃತಪಟ್ಟವರು. ಮಹಾನಂದನನ್ನು ಗಂಡನ ಮನೆಯರು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ, ವರದಕ್ಷಿಣೆಗಾಗಿ ಕಿರುಕುಳ ನೀಡಿ ಸಾಯಿಸಲಾಗಿದೆ ಎನ್ನುವುದು ಪೋಷಕರ ಆರೋಪವಾಗಿದೆ.
ಮಹಾನಂದ ಅವರು ಮೂಲತಃ ಜೇವರ್ಗಿ ತಾಲೂಕಿನ ಹಂದನೂರ ಗ್ರಾಮದ ನಿವಾಸಿ. ಅವರನ್ನು ವರ್ಷದ ಹಿಂದೆ ಹೊನ್ನಕಿರಣಗಿ ಗ್ರಾಮದ ರಾಜು ಅಟ್ಟದಮನಿ ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆ ಸಂದರ್ಭದಲ್ಲಿ ಸಾಕಷ್ಟು ಹಣ ಮತ್ತು ಒಡವೆ ನೀಡಲಾಗಿದ್ದರು ರಾಜು ಅಟ್ಟದಮನಿ ಮತ್ತು ಮನೆಯವರು ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು ಎನ್ನಲಾಗಿದೆ. ಮದುವೆಯಾದ ಬಳಿಕ ಸರಿಯಾಗಿ ಊಟ ಕೊಡದೆ ಸತಾಯಿಸುತ್ತಿದ್ದರು ಎಂಬ ಆರೋಪವಿದೆ.
ಈ ನಡುವೆ, ಮದುವೆ ವಾರ್ಷಿಕೊತ್ಸವಕ್ಕೆ ಬಂಗಾರ ನೀಡುವಂತೆ ಅಳಿಯ ರಾಜು ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಬಂಗಾರ ಕೊಡದ ಹಿನ್ನಲೆಯಲ್ಲಿ ರಾಜು ಮತ್ತು ಆತನ ಕುಟುಂಬಸ್ಥರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಗಂಡ ರಾಜು ಮತ್ತು ಮನೆಯವರ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ.