“ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ, ನಗುವ ಕೇಳುತ ನಗುವುದತಿಶಯದ ಧರ್ಮ, ನಗುವ ನಗಿಸುವ, ನಗಿಸಿ ನಗುತ ಬಾಳುವ ವರ ಮಿಗೆ ಬೇಡಿಕೊಳೊ ಮಂಕುತಿಮ್ಮ “
ಹೀಗೆಂದು ನಗುವ ಕಾಯ್ದು ಕೊಳ್ಳುವ ಬಗೆಯ ಕಗ್ಗದ ಮುತ್ತುಗಳು ಓದುವುದಕ್ಕೆ ಮಾತ್ರ ತುತ್ತಲ್ಲ, ಸುತ್ತೆಲ್ಲ ಪಾಲಿಸಲೂ ಹೌದು. ಪ್ರಸ್ತುತ ಅಂದದ ಸೌಧದೊಳಗೆ ಮೊಬೈಲ್, ಫೋನ್ ಜತೆ ನಗುವ ಹಂಚುವ ಪುಟ್ಟ ಕಂದಮ್ಮಗಳ ಒಲಿಸಿ ನಲಿಸಿದ ಪ್ರಯತ್ನ ನಡೆಯಿತು ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ.
ಪುಟಾಣಿಗಳ ಪ್ರತಿಭಾ ಅನವರಣಕ್ಕಾಗಿ “ನಿಮ್ಮ ಮಗುವಿನ ನಗುವಿಗಾಗಿ” ಶೀರ್ಷಿಕೆಯಡಿ ‘ಜೇಸಿಸ್ ಕಿಡ್ಸ್ ಫೆಸ್ಟ್ -2022’ ಎನ್ನುವ ಪುಟಾಣಿಗಳ ಸ್ಪರ್ಧೆಯು ದಿನಾಂಕ 30.4.2022ರಂದು ನಡೆಯಿತು.
ಸುಮಾರು 100ಕ್ಕಿಂತಲೂ ಹೆಚ್ಚು 2 ವರ್ಷದಿಂದ 5 ವರ್ಷಗಳ ಒಳಗಿನ ವಯೋಮಾನದ ಕಂದಮ್ಮಗಳು ಹೆಸರು ನೋಂದಾಯಿಸಿ, ಸ್ಪರ್ಧೆಯಲ್ಲಿ ಭಾಗವಹಿಸಿದರು. ನರ್ಸರಿ ಮತ್ತು ಕೆಜಿ ಎನ್ನುವ ಎರಡು ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ನರ್ಸರಿ ವಿಭಾಗದ ಪುಟಾಣಿ ಖದೀಜ ಫಾಲಿಹ ಪ್ರಥಮ, ಪುಟಾಣಿ ಶ್ರುತನ್. ಆರ್. ಕೃಷ್ಣ ದ್ವಿತೀಯ ಹಾಗೂ ಕೆಜಿ ವಿಭಾಗದಲ್ಲಿ ಪುಟಾಣಿ ತನುಷ್ ಅಳಿಕೆ ಪ್ರಥಮ ಹಾಗೂ ಪುಟಾಣಿ ಭವಿಷ್ ದ್ವಿತೀಯ ಬಹುಮಾನವಾಗಿ ನಗದು ಹಾಗೂ ಶಾಶ್ವತ ಫಲಕಗಳನ್ನು ಪಡೆದರು. ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೂ ಆಕರ್ಷಕ ಬಹುಮಾನ ನೀಡಲಾಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ
“ಶಿಕ್ಷಣ ಕ್ಷೇತ್ರ ಹೊಸ ಆಯಾಮಗಳನ್ನು ಪಡೆಯುತ್ತಿದೆ, ಅದಕ್ಕೆ ಹೊಂದಿಸಿಕೊಳ್ಳುವ ದೃಷ್ಟಿಕೋನವಿಟ್ಟುಕೊಂಡು 2022-23ನೇ ಸಾಲಿನಿಂದ ಪೂರ್ಣ ಸೌಲಭ್ಯತೆಯೊಂದಿಗೆ ನರ್ಸರಿ ವಿಭಾಗವನ್ನು ತೆರೆಯಲಿದ್ದೇವೆ”. ಎಂದು ಸಂಸ್ಥೆಯ ಅಧ್ಯಕ್ಷ ಯಲ್. ಯನ್. ಕುಡೂರು ರವರು ತಿಳಿಸಿದರು. ಸರ್ಟಿಫಿಕೇಟ್ ಪಡೆಯಲು ಶಿಕ್ಷಣ ಸಂಸ್ಥೆಗಳಿಗೆ ಸೇರುವುದು ಈಗಿನ ವ್ಯವಸ್ಥೆ ಆಗಿದೆ,ಆದರೆ ನಾನು ಕಲಿತ ಈ ಶಾಲೆ ನನಗೆ ಮೌಲ್ಯಯುತ, ಬದುಕ ಕಟ್ಟುವ ಶಿಕ್ಷಣ ಕೊಟ್ಟಿದೆಯೆಂದು ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ವಿದ್ಯಾರ್ಥಿನಿ ಕುಮಾರಿ ಶಾನ್ವಿ ತಿಳಿಸಿದರು.
‘ ಶಿಕ್ಷಣ ಕೇವಲ ವ್ಯವಹಾರಿಕವಾಗದೆ ಜೀವನ ಶಿಕ್ಷಣವಾದಾಗ ಮಾತ್ರ ಸಮಾಜದ ಅಭಿವೃದ್ದಿಗೆ ಪೂರಕವಾಗುತ್ತದೆ, ಆ ಕೆಲಸ ಈ ಸಂಸ್ಥೆ ಮಾಡುತ್ತಿದೆ ಎಂದು ಪ್ರಾಂಶುಪಾಲರಾದ ಜಯರಾಮ ರೈ ಪ್ರಾಸ್ತವಿಕವಾಗಿ ನುಡಿದರು. ಪೋಷಕರ ನೆಲೆಯಲ್ಲಿ ರಮೇಶ್ ಬಿ. ಕೆ, ಸಂಸ್ಥೆಯ ಉಪಾಧ್ಯಕ್ಷ ಶ್ರೀಧರ್ ಶೆಟ್ಟಿ, ಕೋಶಾಧಿಕಾರಿ ಪ್ರಭಾಕರ ಶೆಟ್ಟಿ, ನಿರ್ದೇಶಕರಾದ ಮೋನಪ್ಪ ಶೆಟ್ಟಿ, ಹಸನ್ ವಿಟ್ಲ, ಆಡಳಿತಾಧಿಕಾರಿ ರಾಧಾಕೃಷ್ಣ. ಎ, ಹಿರಿಯ ಶಿಕ್ಷಕ ಕೃಷ್ಣ ಭಟ್,ಉಪ ಪ್ರಾಂಶುಪಾಲರಾದ ಜ್ಯೋತಿ ಶೆಣೈ ಹಾಗೂ ಹೇಮಲತ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶಿಕ್ಷಕಿ ಸವಿತ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ಶಿಕ್ಷಕರು ಸಹಕರಿಸಿದರು.