ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ – ವಿಟ್ಲಸೀಮೆ ಇದರ ಐದನೇ ವಾರ್ಷಿಕ ಕಾರ್ಯಕ್ರಮದ ಹಾಗೂ
ಆರ್.ಕೆ. ಕುಣಿತ ಭಜನಾ ತಂಡ ವಿಟ್ಲ ಇದರ ನೇತೃತ್ವದಲ್ಲಿ ನಡೆಯಲಿರುವ ಮನೆ ಮನೆ ಭಜನೆ ಮನ ಮನಗಳಲ್ಲಿ ಭಜನೆ ಹಾಗೂ ಸೇವಾ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಅಂಗವಾಗಿ, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಕನಕಜಯಂತಿ ಪ್ರಯುಕ್ತ ಭಜನೋತ್ಸವ ಕಾರ್ಯಕ್ರಮ ನಡೆಸುವ ಬಗ್ಗೆ ಪೂರ್ವಭಾವಿ ಸಭೆಯು ವಿಟ್ಲ ಶ್ರೀ ಪಂಚಲಿಂಗೇಶ್ವರ ಸದನದಲ್ಲಿ ಜರುಗಿತು.
ಈ ಸಭೆಯಲ್ಲಿ ಭಜನೋತ್ಸವ ಸಮಿತಿ ರಚಿಸಲಾಗಿದ್ದು, ಸಮಿತಿಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಹಾಗೂ ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಗೌರವ ಮಾರ್ಗದರ್ಶಕರಾಗಿರುತ್ತಾರೆ. ಸಮಿತಿಯ ಅಧ್ಯಕ್ಷರಾಗಿ ಜಗನ್ನಾಥ ಸಾಲ್ಯಾನ್ ವಿಟ್ಲ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ವಿಟ್ಲ ಆರ್.ಕೆ., ಹಾಗೂ ರಾಧಾಕೃಷ್ಣ ಎರುಂಬು ಕೋಶಾಧಿಕಾರಿಯನ್ನೊಳಗೊಂಡ ಕಾರ್ಯಕಾರಿಣಿ ಸಮಿತಿಯನ್ನೂ ರಚಿಸಲಾಯಿತು.
ಈ ಸಭೆಯಲ್ಲಿ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ತಿನ ಅಧ್ಯಕ್ಷರಾದ ಕೃಷ್ಣಯ್ಯ ಕೆ. ವಿಟ್ಲ ಅರಮನೆ, ಪ್ರಧಾನ ಕಾರ್ಯದರ್ಶಿ ಜಯರಾಮ್ ನಾಯ್ಕ್ ಕುಂಟ್ರಕಲ, ಕೋಶಾಧಿಕಾರಿ ದಿನೇಶ್ ಪಟ್ಲ, ಜತೆ ಕೋಶಾಧಿಕಾರಿ ರಾಮಕೃಷ್ಣ ಆಚಾರ್ಯ ಪಡಿಬಾಗಿಲು, ಪ್ರಮುಖರಾದ ಜಯರಾಮ ಬಲ್ಲಾಳ್ ವಿಟ್ಲ ಅರಮನೆ, ಸತೀಶ್ ಆಳ್ವ ಇರಾ ಬಾಳಿಕೆ, ಕೀರ್ತನ ಕೆದಿಲಾಯ, ಸುರೇಶ್ ಮುಕುಡ ಕೋಲ್ಪೆ, ಸಂಜೀವ ಪೂಜಾರಿ ನಿಡ್ಯ, ಜಗನ್ನಾಥ ಕಾಸರಗೋಡು, ಪದ್ಮನಾಭ ಕಟ್ಟೆ, ಗೋವರ್ಧನ್ ವಿಟ್ಲ, ಚಂದ್ರಕಾಂತಿ ಶೆಟ್ಟಿ, ಸಂಜೀವ ಎಂ. ಎಸ್., ಜಯಶೇಖರ ಮಯ್ಯ ಕೋಲ್ಪೆ, ಜತ್ತಪ್ಪ ಟೈಲರ್ ವಿಟ್ಲ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಘಟಸಮಿತಿ ಅಧ್ಯಕ್ಷ ಸುನೀಲ್ ಹಾಗೂ ಧಾರ್ಮಿಕ ಮುಖಂಡರು, ಸಂಘಟನಾ ಪ್ರಮುಖರು, ಭಜನಾ ಮಂಡಳಿಗಳ ಪ್ರಮುಖರು ಉಪಸ್ಥಿತರಿದ್ದರು.