ನವದೆಹಲಿ: 72ನೇ ಗಣರಾಜ್ಯೋತ್ಸವದ ಸಮಾರಂಭ ಇಂದು ರಾಷ್ಟ್ರ ರಾಜಧಾನಿಯಲ್ಲಿ ದೆಹಲಿಯಲ್ಲಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮರಿಗೆ ಗೌರವ ವಂದನೆ ಸಲ್ಲಿಸಿದರು. ಈ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಪಿನ್ ರಾವತ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ರಾಷ್ಟ್ರೀಯ ಯುದ್ಧ ಸ್ಮಾರಕದಿಂದ ಪ್ರಧಾನಿ ನೇರವಾಗಿ ಕೆಂಪುಕೋಟೆಗೆ ತೆರಳಿದರು. ರಾಷ್ಟ್ರಪತಿ ಕೂಡ ರಾಜ್ಪಥ್ ದತ್ತ ಸಾಂಪ್ರದಾಯಿಕ ಭದ್ರತೆಯಲ್ಲಿ ತೆರಳಿ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ವೇಳೆ ರಾಜ್ಪಥ್ ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡ ಆಗಮಿಸಿದರು. ಬಳಿಕ ಸಶಸ್ತ್ರ ಪಡೆಗಳ ಆಕರ್ಷಕ ಕವಾಯತು ಆರಂಭವಾಯಿತು. ಲೆ.ಜ ವಿಜಯ್ ಕುಮಾರ್ ಮಿಶ್ರಾ ಸಾರಥ್ಯದಲ್ಲಿ ರಕ್ಷಣಾ ಪಡೆಗಳು ಪಥಸಂಚಲನವನ್ನು ಆರಂಭಿಸಲಾಯಿತು. ಇದರಲ್ಲಿ ಅತ್ಯಾಧುನಿಕ ಯುದ್ಧೋಪಕರಣಗಳ ಪ್ರದರ್ಶನ ಮಾಡಲಾಯಿತು.
ಈ ಬಾರಿಯ ಪಥಸಂಚಲನದಲ್ಲಿ ಬಾಂಗ್ಲಾದೇಶದ ಸಶಸ್ತ್ರಪಡೆಗಳು ಭಾಗಿಯಾಗಿದ್ದವು. ಬಾಂಗ್ಲಾದೇಶ ಸ್ವಾತಂತ್ರ್ಯಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಲ್ಲಿನ ಮೂರೂ ರಕ್ಷಣಾ ಪಡೆಗಳ ಯೋಧರಿಂದ ಆಕರ್ಷಕ ಪಥಸಂಚಲನ ನಡೆಯಿತು. ನಂತರ ರಾಜ್ಪಥ್ದಲ್ಲಿ ಸಾಂಸ್ಕೃತಿಕ ಪಥಸಂಚಲನ ಆರಂಭವಾಯಿತು.
ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸ್ತಬ್ಧಚಿತ್ರ ಪ್ರದರ್ಶನ ನಡೆಯಿತು. ಕರ್ನಾಟಕದ ವಿಜಯನಗರ ಸ್ತಬ್ಧಚಿತ್ರ ಪ್ರದರ್ಶನಗೊಂಡಿದ್ದು ಎಲ್ಲರ ಗಮನ ಸೆಳೆಯಿತು. ಉತ್ತರಪ್ರದೇಶದಿಂದ ರಾಮ ಮಂದಿರ, ಗುಜರಾತ್, ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸ್ತಬ್ಧಚಿತ್ರ ಪ್ರದರ್ಶನ ನಡೆಯಿತು.