Saturday, June 28, 2025
spot_imgspot_img
spot_imgspot_img

ಕಳಚಿತು ಕೊಂಡಿ: ಎಲ್.ಎನ್. ಕೂಡೂರು ಎಂದರೆ ಆಧುನಿಕತೆ ಮತ್ತು ಪರಂಪರೆಗಳನ್ನು ಜೋಡಿಸಿದ-ಜೋಡಿಸುವ ಕೊಂಡಿ.

- Advertisement -
- Advertisement -

ವಿಟ್ಲದ ಶೈಕ್ಷಣಿಕ ಕ್ಷೇತ್ರವನ್ನು ನೋಡಿದರೆ; ಇಲ್ಲಿನ ಇತಿಹಾಸದಲ್ಲಿ ಮೊತ್ತ ಮೊದಲ ಆಂಗ್ಲ ಮಾಧ್ಯಮ ಶಾಲೆ(ಜೇಸೀಸ್ ಸ್ಕೂಲ್)ಯನ್ನು ಸ್ಥಾಪಿಸಿದ ಹಿರಿಮೆ ಅವರದು.

ಅದರೊಂದಿಗೆ ತಮ್ಮ ತೀರ್ಥರೂಪರಿಂದ ತೆರವಾದ ‘ವಿಠಲ ವಿದ್ಯಾಸಂಘ ವಿಟ್ಲ’ದ ಸಂಚಾಲಕರಾಗಿ ಅದನ್ನೂ ಮುನ್ನಡೆಸಿದ ಛಾತಿ ಅವರದು.


ಜೇಸೀಸ್ ಶಾಲೆಯಲ್ಲೂ ಆಧುನಿಕತೆಯಲ್ಲಿ ಸಮಾಕಾಲೀನ ಸವಾಲುಗಳಿಗೆ ತಕ್ಕಂತೆ Smart class ಮುಂತಾದವುಗಳನ್ನು ಅಳವಡಿಸುವುದರ ಜೊತೆಗೇ ಸಂಸ್ಕೃತ,ಯೋಗ ಕಲಿಕೆಗಳಿಗೂ ಅವಕಾಶವನ್ನು ಕಲ್ಪಿಸಿದ ಮುಕ್ತ ಶಿಕ್ಷಣ ನೀತಿಯ ಕೊಂಡಿಯೂ ಅವರೇ.ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ನೂರಾರು ಉದ್ಯೋಗಿಗಳಿಗೆ ನೆಮ್ಮದಿಯ ಕಲಿಕೆ-ಬದುಕುಗಳು ಸಿಗುತ್ತಿದ್ದರೆ ಅದಕ್ಕೆ ಕಾರಣ ಎಲ್.ಎನ್. ಕೂಡೂರ್ ಅವರ ಸರ್ವಾಂಗೀಣ ದುಡಿಮೆ,ಸಾಂಘಿಕ ಪರಿಶ್ರಮ.

ವಿಠಲ ಪ.ಪೂ.ಕಾಲೇಜು
(ಹೈಸ್ಕೂಲು ಸೇರಿ)
ಈಜು,ಖೋಖೋ ಮತ್ತು ವಾಲಿಬಾಲ್ ಆಟಗಳಿಗೆ ಮಹತ್ತ್ವ ಆದ್ಯತೆಯನ್ನು ನೀಡಿದ ಸಂಸ್ಥೆ. ಈ ಆಟಗಳಲ್ಲಿ ರಾಷ್ಟ್ರ ಮಟ್ಟದ ಆಟಗಾರರನ್ನು ತಯಾರು ಮಾಡಿದ ಕೀರ್ತಿ ಇಲ್ಲಿನ ಶಿಕ್ಷಕರಿಗೆ ಆಡಳಿತ ಮಂಡಳಿಗೆ ಇದೆ. ಇದೀಗ ನೆಟ್ ಬಾಲ್ , ಹ್ಯಾಂಡ್ ಬಾಲ್ ಗಳಂತಹ ಕ್ರೀಡೆಗಳಿಗೂ ಇಲ್ಲಿ ಅವಕಾಶ ಕಲ್ಪಿಸಿದ್ದರೆ ಅದಕ್ಕೆ ಸಂಚಾಲಕರ ನೇತೃತ್ವದ ಆಡಳಿತ ಮಂಡಳಿಯ ಕೊಡುಗೆಯೂ ಇದೆ.
ಅನುದಾನರಹಿತ, ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳಿರುವ ಆಂಗ್ಲ ಮಾಧ್ಯಮ ಶಾಲೆಯನ್ನು ನಡೆಸುವಷ್ಟು ಸುಲಭದಲ್ಲಿ ಅನುದಾನಿತ ಕನ್ನಡ ಮಾಧ್ಯಮ ಸಂಸ್ಥೆಯನ್ನು ನಡೆಸಲಾಗುತ್ತಿಲ್ಲ. ಸುತ್ತಮುತ್ತಲಿನ ಶಾಲೆಗಳ ಸ್ಪರ್ಧಾತ್ಮಕ ಒತ್ತಡಗಳ ನಡುವೆಯೂ ‘ಕಾಡಿಬೇಡಿ’ ಎನ್ನುವಂತೆ ಆರ್ಥಿಕತೆಯನ್ನು ಹೇಗೆಹೇಗೋ ಹೊಂದಿಸಿಕೊಂಡು, ಆಧುನಿಕಸ್ಪರ್ಶ ಸಹಿತ ನಡೆಸುವ ಕಷ್ಟ-ಸಂಕಷ್ಟ ದೇವರಿಗೇ ಅರ್ಪಿತವಾದ ವಿಚಾರ. ಇಲ್ಲೂ ಎಲ್ಲರ ಸಹಕಾರದೊಡನೆ ಸಂಸ್ಥೆಯನ್ನು ಉಳಿಸಲು ಯತ್ನಿಸಿದ ಪರಿ ಗಮನಾರ್ಹ. ಒಂದು ಆಡಳಿತ ಮಂಡಳಿಯ ದಕ್ಷತೆ, ಉದ್ಯೋಗಿಗಳೊಡನಿರುವ ಒಡನಾಟದ ಪರೀಕ್ಷೆಗೆ ಬೇರಾವುದೂ ಬೇಡ, ಅಲ್ಲಿ ನೆಲೆನಿಂತಿರುವ ಅನುದಾನರಹಿತ ನೌಕರರ ಸೇವಾವರ್ಷಗಳು ಸಾಕು.ಇಲ್ಲಿ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ನೌಕರರನ್ನು ಕಾಣಬಹುದು.ಹಲವೆಡೆ ಹೀಗಿಲ್ಲ.ನಾಡಿನ ಅವೆಷ್ಟೋ ಆಡಳಿತ ಮಂಡಳಿಗಳನ್ನು ನೋಡಿದ, ಅವುಗಳೊಂದಿಗೆ ವ್ಯವಹರಿಸಿದ ಅನುಭವದಿಂದ ಹೇಳುತ್ತಿದ್ದೇನೆ- ವಿಠಲ ವಿದ್ಯಾಸಂಘ ಆಶ್ರಯದಲ್ಲಿ ಕೆಲಸ ಮಾಡಲೂ ಒಂದು ಭಾಗ್ಯ ಬೇಕು, ಪುಣ್ಯ ಬೇಕು. ಆ ಮಟ್ಟಿಗೆ ನಾನು ಮಹಾಪುಣ್ಯಶಾಲಿ, ಭಾಗ್ಯಶಾಲಿ.
ತಾಂತ್ರಿಕ ಶಿಕ್ಷಣದ ಅಗತ್ಯತೆಯನ್ನು ಮನಗಂಡು ವಿದ್ಯಾಸಂಘದ ವಜ್ರ ಮಹೋತ್ಸವದ ಸಂದರ್ಭದಲ್ಲಿ ಐಟಿಐಯನ್ನು ಪ್ರಾರಂಭಿಸಲಾಯಿತು. ಆದರೆ ನಿರೀಕ್ಷಿತ ದಾಖಲಾತಿಯ ಕೊರತೆಯಿಂದ ಒಂದಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆಗ ಸುಪ್ರಜೀತ್ ಇಂಡಸ್ಟ್ರೀಸ್, ಬೆಂಗಳೂರಿನವರ ಸಹಯೋಗದೊಂದಿಗೆ ಇದನ್ನು ಮುನ್ನಡೆಸುವ ಸಕಾಲಿಕ ಸೂಕ್ತ ಕ್ರಮ ಕೈಗೊಂಡು ಸಂಸ್ಥೆಯು ಮುಂದುವರೆಯುವಂತಾಯಿತು. (ಇದರೊಂದಿಗೆ ಪ್ರಾರಂಭಗೊಂಡ ಕನಿಷ್ಠ ಮೂರು ಐಟಿಐಗಳು ರಾಜ್ಯದಲ್ಲಿ ಮುಚ್ಚುವಂತಾದುದನ್ನು ನಾವಿಲ್ಲಿ ಗಮನಿಸಬೇಕು. ಅದರಲ್ಲೊಂದು ನಮ್ಮ ಜಿಲ್ಲೆಯ ಸಂಸ್ಥೆ.)
ವರ್ತಮಾನದ ಕಷ್ಟದ ಸ್ಥಿತಿಯ ನಡುವೆಯೂ ಭವಿಷ್ಯಕ್ಕಾಗಿ ಒಂದುಕೈ ನೋಡುವ(Risk ತೆಗೆದುಕೊಳ್ಳುವ) ಅವರ ಮನೋಭಾವ ಅದು ಅವರಿಗೇ ಮೀಸಲು.

ಜೈಪಂಚಲಿಂಗೇಶ್ವರ – ಇದು ಎಲ್. ಎನ್. ರ ಸಪ್ತಾಕ್ಷರೀ ಮಂತ್ರ! ಗೆಲುವಿರಲಿ ಸೋಲಿರಲಿ,
ಆರಂಭವಿರಲಿ ಅಂತ್ಯವಿರಲಿ, ನೋವಿರಲಿ ನಲಿವಿರಲಿ ಈ ಮಂತ್ರ ಈಶ್ವರಾರ್ಪಣೆಯ ಧ್ವನಿಯದ್ದಾಗಿದೆ.ನನ್ನದಲ್ಲ,ನಮ್ಮದಲ್ಲ ಎಲ್ಲವೂ ದೇವರದು ಎಂಬ ಭಾವ, ಭಗವದರ್ಪಣ ಶನೋಭಾವ. ಹನ್ನೊಂದು ವರ್ಷಗಳಿಗೂ ಮಿಕ್ಕಿದ ಜೀರ್ಣೋದ್ಧಾರದ ಸೇವೆ – ಐತಿಹಾಸಿಕ ಬ್ರಹ್ಮಕಲಶಾಭಿಷೇಕೋತ್ಸವ, ಅದಾದ ಬಳಿಕ ಜಾತ್ರೆಯ ದಿನಗಳಲ್ಲಿ ಬಯ್ಯದಬಲಿ (ಪ್ರತಿಷ್ಠಾ ವರ್ಧಂತಿಯ ದಿನ)ಯ ದಿನ ನಡೆಸುವ ರುದ್ರಹೋಮ(12 ವರ್ಷ 12 ಹೋಮಗಳು). ಸರಿಸುಮಾರು 24 ವರ್ಷಗಳ ಪಂಚಲಿಂಗೇಶ್ವರನ ಸೇವಾಭಾಗ್ಯ ಅನನ್ಯ. ಈ ಸಂದರ್ಭದಲ್ಲಿ ಅವರೊಂದಿಗೆ ಪಂಚಲಿಂಗೇಶ್ವರನ ಸೇವೆಗೈದವರಿಗೆ ಕಂಡುಬಂದ ವಿಚಾರವೆಂದರೆ- ಎಲ್.ಎನ್. ಎಂದರೆ trust.ನಂಬಿಕೆ. ನಂಬಿಕೆ ಅವರ ಶಕ್ತಿ. ದೇವರನ್ನು ನಂಬಿದಂತೆ ಮನುಷ್ಯರನ್ನೂ ನಂಬಿದವರು. ಎಲ್ಲ ಮನುಷ್ಯರು ದೇವರಲ್ಲ ಎಂಬುದನ್ನು ಮನಗಂಡವರೂ ಹೌದು.ಜಾತ್ಯತೀತೆಗೆ ಒಂದು ಮೂರ್ತರೂಪವನ್ನು ಕೊಡುವುದಿದ್ದರೆ ಅದು ಎಲ್.ಎನ್. ಅವರ ಈ ಗುಣವಿಶೇಷತೆಯೇ ಜೀರ್ಣೋದ್ಧಾರದ ಯಶಸ್ಸಿನ ಹಿಂದಿನ ಬೆನ್ನೆಲುಬು. ದೇಗುಲದ ಸ್ವಚ್ಛತಾ ಕಾರ್ಯಕರ್ತರಿಂದ ತೊಡಗಿ ತಂತ್ರಿಗಳ ತನಕ ಅವರು ಮಂದಿಯೊಂದಿಗೆ ನಡೆದುಕೊಂಡ ಪರಿ ಅನುಕರಣೀಯ. ಅನುಕರಣೀಯ ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಕಾರಣವಾದ ಸಂಘಟನೆಯ ಶಕ್ತಿಯ ಹಿಂದೆ ಅವರ ಭೇದಭಾವಾತೀತ ಬಾಂಧವ್ಯದ ವ್ಯವಹಾರ ಪರಿಣಾಮಕಾರಿಯಾಗಿ ಕೆಲಸಮಾಡಿತು ಎಂಬುದು ಗಮನಾರ್ಹ.

ವಿಠಲ ಗ್ರಾಮೀಣ ಬ್ಯಾಂಕ್ ನಮ್ಮ ಜಿಲ್ಲೆಯಲ್ಲಿ ತನ್ನದೇ ಆದ ಸ್ಥಾನಮಾನವನ್ನು ಹೊಂದಿರುವ ಸಹಕಾರಿ ಕ್ಷೇತ್ರದ ಯಶಸ್ವಿ ಬ್ಯಾಂಕ್. ಅದರ ಆಧುನೀಕರಣ, ಹೊಸ ಹೊಸ ಶಾಖೆಗಳ ಸ್ಥಾಪನೆ, ನೌಕರರ ಸೇವಾಭದ್ರತೆ-ಕೌಶಲ ತರಬೇತಿ updatingಗ್ರಾಹಕರಿಗೆ ನೂತನಸೇವಾವಕಾಶಗಳು, ಸಮಾಜಮುಖೀ ಸೇವಾಕಾರ್ಯಗಳು… ಇವೆಲ್ಲವುಗಳಲ್ಲಿ ಅವರ ದಕ್ಷ ನಾಯಕತ್ವ ಹಾಗೂ ದೂರದರ್ಶಿತ್ವವು ಎದ್ದು ಕಾಣುತ್ತದೆ.

ಕ್ಯಾಂಪ್ಕೋಗೆ ಸ್ಪರ್ಧೆ-ಸವಾಲುಗಳು ಎದುರಾದಾಗ ಪ್ರತಿಯೊಂದು ಶಾಖೆಯಲ್ಲಿ ಗ್ರಾಹಕರನ್ನು ಒಗ್ಗೂಡಿಸಿ; ವಿಶ್ವಾಸ ಮೂಡಿಸಿ; ಸಮಸ್ಯೆಯನ್ನು ಬೇರುಸಹಿತ ಕಿತ್ತೆಸೆದ ಛಾತಿ ಮರೆಯುವಂತಿಲ್ಲ. ಕ್ಯಾಂಪ್ಕೊ ನಿರ್ದೇಶಕರ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಲ್ಲಿ ಗೆದ್ದುದು ಸದಸ್ಯರಿಗೆ ಇವರ ಮೇಲಿದ್ದಂತಹ ವಿಶ್ವಾಸಕ್ಕೆ ಸಾಕ್ಷಿ. ಸಂಸ್ಥೆ vs ವೈಯಕ್ತಿಕ ಹಿತಾಸಕ್ತಿಯ ವಿಚಾರ ಬಂದಾಗ ಇವರು ತನ್ನ ಸ್ವಹಿತಾಸಕ್ತಿಯನ್ನೂ ತೊರೆದು ಸಂಸ್ಥೆಗಾಗಿ ಮಿಡಿದದ್ದನ್ನು ಕಾಣಬಹುದು.

ದಿ. ಕೃಷ್ಣ ಭಟ್ಟರು(ತಂದೆ) ಇರುವಾಗ ಎಲ್ಯಣ್ಣರಾಗಿ, ಅವರ ಬಳಿಕ ಮಲ್ಲಣ್ಣರಾಗಿ, ವಿಟ್ಲದ ಜನತೆಗೆ ಎಲ್.ಎನ್. ಆಗಿ,ಸರ್ ಆಗಿ, ಬಂಧುಗಳಿಗೆ ರಮೇಶ-ರಮೇಶಣ್ಣನಾಗಿ, ವಿಟ್ಲದ ಹೆಚ್ಚಿನ ಎಲ್ಲ ಕ್ಷೇತ್ರಗಳಲ್ಲಿ ಕೇವಲ ಸೇವಾಮನೋಭಾವದಿಂದ ದುಡಿದು, ಕೊನೆಯುಸಿರಿನ ತನಕ ತನಗಿಂತ ತಾನಿದ್ದ ಸಂಸ್ಥೆಗಳ ಹಿತವನ್ನು ಕಾಣುತ್ತಾ ಶಾರೀರಕವಾಗಿ ಇಲ್ಲವಾದ ರಮೇಶಣ್ಣನಿಗೆ ನಮೋನಮಃ. ರಮೇಶಣ್ಣನ ಕಾಯ ಅಳಿಯಿತು; ಕಾಯಕ ಉಳಿಯಿತು. ನನ್ನ-ವಿಟ್ಲದ ನಡುವೆ ನಿವೃತ್ತಿಯ ನಂತರವೂ ಇದ್ದ ಮಾನವ ಕೊಂಡಿ ಕಳಚಿತು. ಜೈಪಂಚಲಿಂಗೇಶ್ವರ. ಓಂಶಾಂತಿಃ.

ಯು.ಎಸ್. ವಿಶ್ವೇಶ್ವರ ಭಟ್
ನಿವೃತ್ತ ಪ್ರಾಂಶುಪಾಲರು

- Advertisement -

Related news

error: Content is protected !!