



ಕನ್ಯಾನ ಮತ್ತು ಕರೋಪಾಡಿ ಗ್ರಾಮಗಳ ಮೂಲಕ ಹಾದುಹೋಗುವ ಕನ್ಯಾನ-ಮುಗುಳಿ-ಉಪ್ಪಳ ಅಂತರ್ರಾಜ್ಯ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿರುವುದನ್ನು ಖಂಡಿಸಿ ಸಾರ್ವಜನಿಕರು ನೆಲ್ಲಿಕಟ್ಟೆ ಜಂಕ್ಷನಲ್ಲಿ ಪ್ರತಿಭಟನೆ ನಡೆಸಿದರು.
ಬಾರಿಗೆ ನಿಯಮಬಾಹಿರವಾಗಿ ಹನ್ನೆರಡು, ಹದಿನಾಲ್ಕು, ಹದಿನಾರು ಹಾಗೂ ಇಪ್ಪತ್ತೆರಡು ಚಕ್ರಗಳ ಭಾರೀ ಸರಕು ಸಾಗಾಟದ ಲಾರಿಗಳು ನಲ್ವತ್ತು, ಐವತ್ತು ಟನ್ ಬಾಕ್ಸೈಟ್ ತುಂಬಿಸಿ ಹೊರ ರಾಜ್ಯಗಳಿಗೆ ಸಂಚರಿಸುತ್ತಿವೆ. ರಸ್ತೆಯಲ್ಲಿ ಓಡಾಡುವ ನಾಗರಿಕರ ಮತ್ತು ವಾಹನ ಸವಾರರ ಪಾಲಿಗೆ ಅಕ್ರಮ ಹಾಗೂ ಸಾರಿಗೆ ನಿಯಮ ಉಲ್ಲಂಘಿಸಿ ಸಂಚರಿಸುತ್ತಿರುವ ಬಾಕ್ಸೈಟ್ ಸಾಗಾಟದ ಯಮದೂತ ಲಾರಿಗಳು ಸಂಕಷ್ಟ ತಂದೊಡ್ಡಿದೆ. ಈ ಬಗ್ಗೆ ಎಚ್ಚೆತ್ತುಕೊಂಡು ಬಾಕ್ಸೈಟ್ ಲಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಲವು ಬಾರಿ ಮನವಿ ನೀಡಿದ್ದರು. ಆದರೆ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಮನವಿಗೆ ಯಾವುದೇ ರೀತಿಯಲ್ಲಿ ಈವರೆಗೂ ಸ್ಪಂದಿಸದ ಕಾರಣ ಇಂದು ಬೆಳಗ್ಗಿನಿಂದ ನೆಲ್ಲಿಕಟ್ಟೆ ಜಂಕ್ಷನಲ್ಲಿ ಪ್ರತಿಭಟನೆ ನಡಯಿತು.

ಹೋರಾಟಗಾರ ಶ್ರೀನಿವಾಸ ಭಟ್ ಕಮ್ಮಾಜೆ, ಮೊಯಿದು ಕುಂಞಿ ಪಾದೆಕಲ್ಲು, ಅಬ್ದುಲ್ ಹಮೀದ್ ಪಾದೆಕಲ್ಲು, ಆನಂದ ಪಾದೆಕಲ್ಲು, ವೆಂಕಟ್ರಮಣ ಭಟ್ ಪಾದೆಕಲ್ಲು, ಸಫಾನ್ ಕರೋಪಾಡಿ, ಕುಂಞಿಮೋನು ಮಂಡಿಯೂರು, ಖಾದರ್ ಕುಕ್ಕಾಜೆ, ರಘುರೋಮ ಶೆಟ್ಟಿ ಕನ್ಯಾನ, ಡಾ. ರಾಮಚಂದ್ರ ಭಟ್ ಮತ್ತು ಗಣೇಶ್ ಭಟ್ ಮಂಡ್ಯೂರು ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಸಹಾಯಕ ಇಂಜಿನಿಯರ್ ಜಗದೀಶ್, ಬಂಟ್ವಾಳ ಪ್ರಾದೇಶಿಕ ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರಾದ ಪ್ರಮೋದ್ ಎಂ.ಭಟ್, ಸಚಿನ್, ಕನ್ಯಾನ ಮತ್ತು ಕರೋಪಾಡಿ ಗ್ರಾಮಗಳ ಗ್ರಾಮ ಪಂಚಾಯತ್ ಅಧ್ಯಕ್ಷರುಗಳು, ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು. ಪ್ರತಿಭಟನಾ ಸಂದರ್ಭದಲ್ಲಿ ವಿಟ್ಲ ಠಾಣಾ ಪೊಲೀಸ್ ಉಪ ನಿರೀಕ್ಷಕರು ಮತ್ತು ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.








