ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭಾ ಸದಸ್ಯರಾಗಿ ಗುರುವಾರ ಕನ್ನಡದಲ್ಲೇ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು.
‘ವೀರೇಂದ್ರ ಹೆಗ್ಗಡೆ ಎಂಬ ಹೆಸರಿನ ನಾನು, ರಾಜ್ಯಸಭೆಯ ಸದಸ್ಯನಾಗಿ ನಾಮನಿರ್ದೇಶನ ಹೊಂದಿದವನಾಗಿ ಕಾನೂನಿನ ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನದ ವಿಷಯದಲ್ಲಿ ನಿಜವಾದ ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದು, ಭಾರತದ ಸಾರ್ವಭೌಮತೆ ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆಂದು ಮತ್ತು ನಾನು ಕೈಗೊಳ್ಳಲಿರುವ ಕಾರ್ಯಗಳನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತೇನೆ ಎಂದು ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಎಂದು ಡಾ.ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ಡಾ.ಡಿ.ವೀರೇಂದ್ರ ಹೆಗ್ಗಡೆ, ಸಂಗೀತ ನಿರ್ದೇಶಕ ಇಳಯರಾಜ, ಅಥ್ಲೀಟ್ ಪಿ.ಟಿ. ಉಷಾ ಹಾಗೂ ಚಲನಚಿತ್ರ ಕಥೆಗಾರ ವಿ.ವಿಜಯೇಂದ್ರ ಪ್ರಸಾದ್ ಅವರನ್ನು ಜುಲೈ 6ರಂದು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿತ್ತು. ಸೋಮವಾರ ಸಂಸತ್ ಅಧಿವೇಶನ ಆರಂಭಗೊಂಡಿದ್ದು, ಗುರುವಾರ ವೀರೇಂದ್ರ ಹೆಗ್ಗಡೆ ಪ್ರಮಾಣ ವಚನ ಸ್ವೀಕರಿಸಿದರು. ಹೆಗ್ಗಡೆ ಅವರು ಬುಧವಾರವೇ ದೆಹಲಿಗೆ ಪ್ರಯಾಣ ಬೆಳೆಸಿದ್ದರು.
ನಾಮನಿರ್ದೇಶನಗೊಂಡ ವೇಳೆ ಹೆಗ್ಗಡೆಯವರು ಬೆಂಗಳೂರು ಪ್ರವಾಸದಲ್ಲಿದ್ದರು. ಜುಲೈ 9ರಂದು ಅವರು ಧರ್ಮಸ್ಥಳಕ್ಕೆ ಆಗಮಿಸಿದಾಗ, ಚಾರ್ಮಾಡಿ ಘಾಟಿಯಿಂದಲೇ ಭವ್ಯ ಸ್ವಾಗತ ಕೋರಲಾಗಿತ್ತು. ನಂತರ ಪ್ರತಿ ದಿನವೂ ಅಭಿಮಾನಿಗಳು, ಭಕ್ತರು, ಗಣ್ಯರು ಭೇಟಿ ನೀಡಿ ಹೆಗ್ಗಡೆಯವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಬುಧವಾರದವರೆಗೆ ಸಹಸ್ರಾರು ಮಂದಿ ವೈಯಕ್ತಿಕವಾಗಿ ಭೇಟಿ ಮಾಡಿದ್ದಾರೆ. ಇನ್ನು ಕೆಲದಿನ ಹೆಗ್ಗಡೆಯವರು ದೆಹಲಿಯಲ್ಲಿ ಇರುವುದರಿಂದ ಭೇಟಿ ಸಾಧ್ಯವಾಗುವುದಿಲ್ಲ.