
ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆಂದು ಆರೋಪಿಸಿ ವ್ಯಕ್ತಿಯೋರ್ವರಿಗೆ ಯುವಕರ ಗುಂಪೊಂದು ಮಾರಾಣಾಂತಿಕ ಹಲ್ಲೆಗೈದು ಓರ್ವ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪರಾರಿ ಶಾಂತಿನಗರದಲ್ಲಿ ನಡೆದಿದೆ.

ತಾಲೂಕಿನ ಪರಾರಿ ಶಾಂತಿನಗರದಲ್ಲಿ ನಾರಾಯಣ ನಾಯ್ಕ(47) ಎಂಬವರು ಬೀಡಿ ಕೊಟ್ಟು ವಾಪಸ್ ಬರುವಾಗ ಶಾಂತಿನಗರ ಆಟದ ಮೈದಾನದಲ್ಲಿ ಯುವಕರ ಗುಂಪು ಅಡ್ಡಹಾಕಿ ನೀನು ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದೀಯಾ ಎಂದು ಹೇಳಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಇದನ್ನು ಪಕ್ಕದಲ್ಲಿ ನೋಡಿದ ನಾರಾಯಣ ನಾಯ್ಕ ಅವರ ಹೆಂಡತಿಯ ಅಕ್ಕನ ಗಂಡ ಜಾರಪ್ಪ ನಾಯ್ಕ(55) ಹಲ್ಲೆಯನ್ನು ತಪ್ಪಿಸಲು ಬಂದಾಗ ಅವರಿಗೂ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಜಾರಪ್ಪ ನಾಯ್ಕ ಮತ್ತು ನಾರಾಯಣ ನಾಯ್ಕ ಇಬ್ಬರು ಅಸ್ವಸ್ಥರಾಗಿ ಬಿದ್ದಿದ್ದರು.

ಈ ಬಗ್ಗೆ ಸ್ಥಳೀಯರು ಮನೆಯವರಿಗೆ ಮಾಹಿತಿ ತಿಳಿಸಿದಾಗ ಜಾರಪ್ಪ ಅವರ ಮೊದಲ ಮಗ ರಾಜಶೇಖರ್ ಬಂದು ವಾಹನದಲ್ಲಿ ಉಜಿರೆ ಖಾಸಗಿ ಆಸ್ಪತ್ರೆಗೆ ಕರೆತರುತ್ತಿದ್ದಾಗ ದಾರಿ ಮಧ್ಯೆ ಹೃದಯಾಘಾತದಿಂದ ಜಾರಪ್ಪ ನಾಯ್ಕ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ನಂತರ ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ನಾರಾಯಣ ನಾಯ್ಕ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆಗೈದವರನ್ನು ಸ್ಥಳೀಯ ನಿವಾಸಿಗಳಾದ ಮನೋಹರ್, ಚಂದ್ರಕಾಂತ್ ನಾಯ್ಕ ದೀಪಕ್ ರೈ, ಹರಿಪ್ರಸಾದ್,ವಿಜಯ್ ,ವೈಶಾಲಿ ಮತ್ತಿತರರು ಎನ್ನಲಾಗಿದೆ. ಈ ಬಗ್ಗೆ ಸಾವನ್ನಪ್ಪಿರುವ ಜಾರಪ್ಪ ನಾಯ್ಕ ಮಗ ರಾಜಶೇಖರ್ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.










