ಬಂಟ್ವಾಳ : ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 247/2017 ಕಲಂ 379 ಹಾಗೂ 34 ಐಪಿಸಿ ಪ್ರಕರಣದಲ್ಲಿ ಆರೋಪಿಗಳಾಗಿ, ಕಳೆದ ಸುಮಾರು 5 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ, ಉತ್ತರ ಪ್ರದೇಶ ಮೂಲದ 18 ಮಂದಿ ಆರೋಪಿಗಳನ್ನು ಬಂಟ್ವಾಳ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಉತ್ತರಪ್ರದೇಶ ರಾಜ್ಯದ ಬಲಿಯಾ ಜಿಲ್ಲೆ, ಘಾಜಿಯಾಪುರ ನಿವಾಸಿಗಳಾದ ಪೀಯುಶ್ ಕುಮಾರ್, ವಿನಯ್ ಕುಮಾರ್, ಬ್ರಿಜಿ ನಾರಾಯಣ, ರವೀಂದ್ರ, ಕೃಪ ಶಂಕರ್, ವಿವೇಕ್ ರಾಮ್, ಬದ್ಧ ರಾಮ್, ನಂದಿನಿ ರಾಮ್, ಕಿಶೋರ್ ಕುಮಾರ್, ಶಾಮ್ ಬಿಹಾರಿ ರಾಮ್, ಪ್ರೇಮಾ ಚಂದ ರಾಮ್, ಸತೇಂದ್ರ, ಭಗವಾನ್ ರಾಮ್, ಉಮೇಶ್ ರಾಮ್, ರಾಸ್ ಬಿಹಾರಿ ರಾಮ್, ಭಗೀರಥಿ ಚೌಧರಿ, ಸುನಿಲ್ ರಾಮ್, ನಂದಿಹಳ ರಾಮ್ ಎಂದು ಹೆಸರಿಸಲಾಗಿದೆ.
ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ ಬಿ ಹಾಗೂ ಪಿಎಸ್ಸೆ ಹರೀಶ್ ಎಂ ಆರ್ ಅವರ ಮಾರ್ಗದರ್ಶನದಲ್ಲಿ, ಪಿಎಸ್ಟ್ ಮೂರ್ತಿ, ಎಚ್ ಸಿ ಗಣೇಶ್ ಪ್ರಸಾದ್, ಪಿಸಿ ಯೋಗೇಶ್, ಡಿ ಎಲ್ ವಿಜಯ್ ಕುಮಾರ್, ಸುರೇಶ್ ಉಪ್ಪಾರ ಅವರನ್ನೊಳಗೊಂಡ ತಂಡ ಈ ಬಂಧನ ಕಾರ್ಯಾಚರಣೆ ನಡೆಸಿದೆ.
ಬಂಧಿತರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ದಂಡ ವಿಧಿಸಿ ಪ್ರಕರಣ ಮುಕ್ತಾಯಗೊಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.