ಬೆಂಗಳೂರು: ಪುಸ್ತಕ ಪ್ರಕಾಶನಗಳು ಹಾಗೂ ಪುಸ್ತಕ ಮಾರಾಟ ಮಳಿಗೆಗಳನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಿ ಪುಸ್ತಕಗಳ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕೆಂದು ಪುಸ್ತಕ ಪ್ರಕಾಶಕರು, ಮಾರಾಟಗಾರರು, ಲೇಖಕರು ಹಾಗೂ ಓದುಗರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಬುಧವಾರ ಬಹುರೂಪಿ ಬುಕ್ ಹಬ್ ವತಿಯಿಂದ ‘ಪುಸ್ತಕವೇಕೆ ಅಗತ್ಯ ವಸ್ತುವಲ್ಲ’ ಎಂಬ ವಿಷಯದ ಕುರಿತು ಆನ್ ಲೈನ್ ನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಪುಸ್ತಕ ಪ್ರಕಾಶಕರು ಹಾಗೂ ಲೇಖಕರು, ವೈನ್ ಸ್ಟೋರ್ ಗಳನ್ನು ಅಗತ್ಯವೆಂದು ಪರಿಗಣಿಸಿರುವ ರಾಜ್ಯ ಸರ್ಕಾರ ಪುಸ್ತಕ ಮಳಿಗೆಗಳನ್ನು ಅಗತ್ಯ ಪಟ್ಟಿಗಳಲ್ಲಿ ಪರಿಗಣಿಸದಿರುವುದು ದುರಾದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ವೇಳೆ ನವ ಕರ್ನಾಟಕದ ರಮೇಶ್ ಉಡುಪ ಮಾತನಾಡಿ ಬೇರೆ ಸಂದರ್ಭಗಳಿಗಿಂತ ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಜನತೆಗೆ ಪುಸ್ತಕದ ಅಗತ್ಯವಿದೆ. ಮನೆಯಲ್ಲಿ ಬಂಧಿಯಾಗಿರುವ ಜನರಿಗೆ ಮನರಂಜನೆ, ಜ್ಞಾನಾರ್ಜನೆಗೆ ಪುಸ್ತಗಳ ಓದು ಅಗತ್ಯವಿದೆ ಹಾಗೂ ಕೋವಿಡ್ ಸಾವು ನೋವಿನಿಂದ ಒತ್ತಡಕ್ಕೆ ಒಳಗಾಗಿರುವ ಜನತೆಯನ್ನು ಪುಸ್ತಕಗಳು ಸಾಂತ್ವನ ನೀಡಬಲ್ಲವು ಎಂದು ತಿಳಿಸಿದ್ದಾರೆ.
ಸ್ವಪ್ನ ಬುಕ್ ಹೌಸ್ ನ ಕನ್ನಡ ವಿಭಾಗದ ಮುಖ್ಯಸ್ಥ ದೊಡ್ಡೇಗೌಡ ಮಾತನಾಡಿ, ಸಮಾಜದಲ್ಲಿ ಪುಸ್ತಕದ ಪ್ರಾಮುಖ್ಯತೆಯ ಕುರಿತು ಸರ್ಕಾರಕ್ಕೆ ಹೇಳಿಕೊಡಬೇಕಾದ ಅಗತ್ಯ ಸೃಷ್ಟಿಯಾಗಿದ್ದೆ ದುರಾದೃಷ್ಟಕರ, ಸರ್ಕಾರವೇ ಮುಂದೆ ನಿಂತು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಮೂಲಕ ಜನತೆಗೆ ಅಗತ್ಯ ಪುಸ್ತಕಗಳನ್ನು ಸರಬರಾಜು ಮಾಡುವಂತಹ ಮಹತ್ವದ ಕಾರ್ಯದಲ್ಲಿ ತೊಡಗಬೇಕಾಗಿದೆ ಎಂದರು.
ಮನಃ ಶಾಸ್ತ್ರದಲ್ಲಿ ಏಕಾಂಗಿತನ ತಳಮಳ ಆತಂಕ ಖಿನ್ನತೆಯಿಂದ ಬಳಲುತ್ತಿರುವವರಿಗೆ ಪುಸ್ತಕ ಓದು ಒಂದು ಚಿಕಿತ್ಸೆಯ ವಿಧಾನವಾಗಿದೆ ಪುಸ್ತಕಗಳು ಔಷಧಿ ರೀತಿಯಲ್ಲಿ ಬಳಕೆಯಾಗುತ್ತಿವೆ. ಕೆಲವು ಮೂಢರು ಕೋವಿಡ್ ಗೆ ಸೆಗಣಿ ಬಳಿದುಕೊಳ್ಳುವುದು ಸೇರಿದಂತೆ ಮೌಢ್ಯಾಚರಣೆಗೆ ಜನತೆಯನ್ನು ಪ್ರೆರೇಪಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಆರೋಗ್ಯ, ವೈಜ್ಞಾನಿಕ ವಿಚಾರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಜನತೆಗೆ ತಲುಪಿಸುವಂತಹ ಕೆಲಸವಾಗಬೇಕಿದೆ ಎಂದು ಮನಃಶಾಸ್ತ್ರಜ್ಞ ಡಾ. ಸಿ. ಆರ್. ಚಂದ್ರಶೇಖರ್ ತಿಳಿಸಿದ್ದಾರೆ.