ಬಂಟ್ವಾಳ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ, 180 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಫೆ.19ರಂದು ಮಧ್ಯಾಹ್ನ ವೇಳೆ ಬಂಟ್ವಾಳ ತಾಲೂಕು ಕೊಡ್ಮಾಣು ಗ್ರಾಮದ ಪಕ್ಕಳಪಾದೆ ಪ್ರದೇಶದ ರಸ್ತೆ ಬದಿಯ ನಿರ್ಜನ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹಿಸಿಕೊಂಡಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಯಿತು. ಮಾಹಿತಿ ಆಧಾರದಲ್ಲಿ ಮಂಜುನಾಥ ಟಿ., ಪೊಲೀಸ್ ಉಪನಿರೀಕ್ಷಕರು (ಕಾ&ಸು), ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದರು.
ಸ್ಥಳದಲ್ಲಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತನು ಬಂಟ್ವಾಳ ಮೇರಮಜಲು ನಿವಾಸಿ ಪ್ರಶಾಂತ್ @ ಪ್ರಸಾದ್ (30) ಎಂದು ತಿಳಿದುಬಂದಿದೆ. ಗಾಂಜಾವನ್ನು ಸಂಗ್ರಹಿಸಿ ಗಿರಾಕಿಗಳಿಗೆ ಮಾರಾಟ ಮಾಡಲು ಬಂದಿರುವುದಾಗಿ ಆತನು ಒಪ್ಪಿಕೊಂಡಿದ್ದಾನೆ. ತಪಾಸಣೆ ವೇಳೆ ಆತನ ಬಳಿಯಿಂದ 180 ಗ್ರಾಂ ಗಾಂಜಾವನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.ಇನ್ನಷ್ಟು ವಿಚಾರಣೆಯಲ್ಲಿ, ಗಾಂಜಾವನ್ನು ಬಂಟ್ವಾಳದ ಪಲ್ಲಮಜಲು ನಿವಾಸಿ ಅಬ್ದುಲ್ ರಜಾಕ್ ಎಂಬವರು ಗಿರಾಕಿಗಳಿಗೆ ಮಾರಾಟ ಮಾಡುವಂತೆ ನೀಡಿರುವುದಾಗಿ ಆರೋಪಿತನು ತಿಳಿಸಿದ್ದಾನೆ.
ಬಂಧಿತನನ್ನು ವಶದಲ್ಲಿಟ್ಟುಕೊಂಡು, ಆತನ ಬಳಿಯಿದ್ದ ದ್ವಿಚಕ್ರ ವಾಹನವನ್ನು ಸಹ ಸ್ವಾಧೀನಪಡಿಸಿಕೊಂಡ ಪೊಲೀಸರು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 19/2026 ರಂತೆ 8(C) r/w 20(b)(ii)(A) NDPS ಕಾಯ್ದೆ 1985ರಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.








