ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಶ್ರೀ ಕ್ಷೇತ್ರದಲ್ಲಿ ನಡೆದ ಮದುವೆ ಕಾರ್ಯಕ್ರಮ ರಾಜ್ಯಾದ್ಯಂತ ಸುದ್ದಿಯಾಗಿದೆ. ವಧು ವರರು ಇಬ್ಬರೂ ಸಹ ಕುಬ್ಜರು. ಆದ್ರೆ ಇವರಿಬ್ಬರ ಪ್ರೀತಿಗೆ ಎಳ್ಳಷ್ಟು ಕೊರತೆಯಿರಲಿಲ್ಲ. ಪುಟ್ಟ ಮಕ್ಕಳು ವಧುವರಂತೆ ವೇಷ ತೊಟ್ಟ ರೀತಿ ಎಲ್ಲರಿಗೂ ಭಾಸವಾಗಿತ್ತು..! ಆದ್ರೆ ದಿಟ್ಟಿಸಿ ನೋಡಿದಾಗ ಇವರಿಬ್ಬರೂ ಕುಬ್ಜ ವಧು ವರ ಎಂದು ತಿಳಿದಾಗ ಅಲ್ಲಿದ್ದ ಜನತೆ ಆಶ್ಚರ್ಯವಾಗಿತ್ತು.
ಬೆಂಗಳೂರಿನ ಟಿ ದಾಸರಹಳ್ಳಿ ಮೂಲದ ಹಾಗೂ ಎನ್ಜಿಒದಲ್ಲಿ ಕೆಲಸ ಮಾಡುತ್ತಿರುವ 3 ಅಡಿ 8 ಇಂಚು ಎತ್ತರದ 28 ವರ್ಷದ ಯುವಕ ವಿಷ್ಣುಚಾರಿ ಹಾಗೂ ಕೋಲಾರ ತಾಲೂಕಿನ ಕೋಡಿರಾಮಸಂದ್ರದ ನಿವಾಸಿ ಹಾಗೂ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ 3 ಅಡಿ 5 ಇಂಚು ಎತ್ತರ ಯುವತಿ ಜ್ಯೋತಿ ವಿವಾಹವಾಗಿದ್ದಾರೆ. ಖಾಸಗಿ ಸಮಾರಂಭವೊಂದರಲ್ಲಿ ಇಬ್ಬರಿಗೂ ಪರಿಚಯವಾಗಿದೆ. ಪರಿಚಯ ಸ್ನೇಹದಿಂದ ಕೂಡಿರುವಾಗಲೇ ವಿಷ್ಣು, ಜ್ಯೋತಿ ಮನೆಯವರಿಗೆ ಮದುವೆ ಮಾಡಿಕೊಳ್ಳುವ ಬಗ್ಗೆ ತಿಳಿಸಿದ್ದಾರೆ. ಇದರಿಂದ ಎರಡು ಮನೆಯರು ಕುಳಿತು ಮಾತನಾಡಿ ಮದುವೆ ನಿರ್ಧಾರಕ್ಕೆ ಬಂದಿದ್ದಾರೆ.
ಕೈವಾರದಲ್ಲಿ ಮದುವೆ
ಶ್ರೀ ಕ್ಷೇತ್ರ ಯೋಗಿನಾರೇಯಣರ ತೋಪೋಭೂಮಿಯಾಗಿರುವ ಕೈವಾರದಲ್ಲಿ ಸರಳವಾಗಿ ಅದರಲ್ಲೂ ಉಚಿತ ಮದುವೆಗಳು ನಡೆಯುವುದು ಸರ್ವೆ ಸಾಮಾನ್ಯ. ಇನ್ನೂ ಕೈವಾರದ ದೇವಸ್ಥಾನದಲ್ಲಿ ನಡೆದ ಮದುವೆಗಳು ಯಶಸ್ವಿಯಾಗಿ ನೇರವೇರುತ್ತವೆ. ಜೀವನದಲ್ಲಿ ಯಾವುದೇ ಅಡೆ ತಡೆ ಸಮಸ್ಯೆಗಳು ಉದ್ಭವಿಸುವುದಿಲ್ಲ ಎನ್ನುವ ನಂಬಿಕೆ ಹಿನ್ನೆಲೆ ಕೈವಾರದಲ್ಲಿ ಮದುವೆ ಮಾಡಿಕೊಂಡಿದ್ದಾರೆ.