ವಿಟ್ಲ: ಬೊಬ್ಬೆಕೇರಿ ದೇವಸ್ಥಾನದ ಒಳರಸ್ತೆಯಲ್ಲಿರುವ ಜನಪ್ರಿಯ ಚಿಕನ್ ಸೆಂಟರ್ನಲ್ಲಿ ಭಾನುವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರ ತ್ವರಿತ ಕ್ರಮದಿಂದ ದೊಡ್ಡ ಅನಾಹುತ ತಪ್ಪಿದ ಘಟನೆ ನಡೆದಿದೆ.

ಇಸ್ಮಾಯಿಲ್ ಅವರ ಮಾಲೀಕತ್ವದ ಅಂಗಡಿಯಲ್ಲಿ ರಾತ್ರಿ ಸುಮಾರು 1 ಗಂಟೆ ವೇಳೆಗೆ ಈ ಅವಘಡ ಸಂಭವಿಸಿದೆ. ಸಮಾರಂಭದ ನಿಮಿತ್ತ ಕೋಳಿ ಮಾಂಸ ತಯಾರಿಸಲಾಗುತ್ತಿದ್ದ ವೇಳೆ ಗ್ಯಾಸ್ ಒಲೆಯಿಂದ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲೇ ಅಂಗಡಿಯೊಳಗೆ ವ್ಯಾಪಿಸಿತು ಎಂದು ತಿಳಿದುಬಂದಿದೆ.ಬೆಂಕಿ ಕಾಣಿಸಿಕೊಂಡ ತಕ್ಷಣ ಸುತ್ತಮುತ್ತಲಿನವರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಕ್ಕೆ ಮುಂದಾದರು.
‘ಫ್ರೆಂಡ್ಸ್ ವಿಟ್ಲ’ ತಂಡದ ಮುರಳೀಧರ ವಿಟ್ಲ ಅವರು ಪಿಕಪ್ ವಾಹನದಲ್ಲಿ ನೀರು ತಂದು ಸಹಕರಿಸಿದರು. ಆಸಿಫ್ ಪೆರುವಾಯಿ, ನವೀದ್ ವಿಟ್ಲ ಮತ್ತು ಅನ್ಸಾರ್ ಪೆರುವಾಯಿ ಅವರು ಹತ್ತಿರದ ಪೆಟ್ರೋಲ್ ಬಂಕ್ನಿಂದ ಅಗ್ನಿಶಾಮಕ ಸಾಧನಗಳನ್ನು ತರಿಸಿ ಬೆಂಕಿ ಹರಡುವುದನ್ನು ತಡೆದರು.ಸ್ಥಳೀಯರ ಸಮನ್ವಯ ಮತ್ತು ಸಮಯಪ್ರಜ್ಞೆಯಿಂದ ಬೆಂಕಿ ಶೀಘ್ರದಲ್ಲೇ ನಿಯಂತ್ರಣಕ್ಕೆ ಬಂದು, ಪಕ್ಕದ ಕಟ್ಟಡಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ.ಘಟನೆಯಲ್ಲಿ ಅಂಗಡಿಯ ಕೆಲ ಸಾಮಗ್ರಿಗಳು ಮಾತ್ರ ಹಾನಿಗೀಡಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸದಿರುವುದು ನಿಟ್ಟಿನಲ್ಲಿ ಭಾಗ್ಯಕರವೆಂದು ಹೇಳಲಾಗಿದೆ.








