




ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯಲ್ಲಿ ಪುತ್ತೂರು ಬೆಡಿ ಎಂದೇ ಪ್ರಸಿದ್ದಿ ಪಡೆದ ಸುಡುಮದ್ದು ಪ್ರದರ್ಶನ ಈ ಬಾರಿಯೂ ಭಕ್ತರು ಸೇವೆಯ ಮೂಲಕ ನಡೆಸಲಿದ್ದು, ಮಾ. 18ರಂದು ಸುಡುಮದ್ದು ಪ್ರದರ್ಶನ ನೀಡುವ ಸಂಸ್ಥೆಯ ಮಾಲಕರು ಪ್ರಾರ್ಥನೆ ಮಾಡಿ ಸ್ಥಳ ಪರಿಶೀಲನೆ ಮಾಡಿದರು.
ಕಾರ್ಕಳದ ಗುರ್ಜಿ ನಾಗರಾಜ್ ಕಿಣಿ ಪಯರ್ವರ್ಕ್ಸ್ ಡೀಲರ್ಸ್ನ ಆಕಾಶ್ ಮತ್ತು ಅವರ ತಂಡ ಸುಡುಮದ್ದು ಪ್ರದರ್ಶನ ನೀಡಲಿದ್ದು, ಪುತ್ತೂರು ಜಾತ್ರೆಯ ಸಂದರ್ಭ ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಭಂಡಾರ ಬರುವ ಸಂದರ್ಭ ಮತ್ತು ಎ.17ರ ಬ್ರಹ್ಮರಥೋತ್ಸವದ ಸಂದರ್ಭ ಸುಡುಮದ್ದು ಪ್ರದರ್ಶನ ನೀಡಲಿದ್ದಾರೆ. ಈ ಕುರಿತು ಶ್ರೀ ದೇವರ ನಡೆಯಲ್ಲಿ ಅವರು ಪ್ರಾರ್ಥನೆ ಮಾಡಿದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಪ್ರಸಾದ ನೀಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಅವರು ದೇವಳದ ಗೌರವಾರ್ಥ ಶಲ್ಯ ನೀಡಿ ಭಕ್ತರು ನೀಡಿದ ಮುಂಗಡ ಹಣವನ್ನು ಹಸ್ತಾಂತರಿಸಿದರು. ಬಳಿಕ ಸುಡುಮದ್ದು ಪ್ರದರ್ಶನ ಸ್ಥಳವನ್ನು ಪರಿಶೀಲನೆ ಮಾಡಲಾಯಿತು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಈಶ್ವರ ಬೆಡೇಕರ್, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಲೋಕೇಶ್ ಪಡ್ಡಾಯೂರು ಮತ್ತು ಕಾರ್ಕಳದ ಗುರ್ಜಿ ನಾಗರಾಜ್ ಕಿಣಿ ಪಯರ್ವರ್ಕ್ಸ್ ಡೀಲರ್ಸ್ ತಂಡದವರು ಜೊತೆಗಿದ್ದರು.








