ಹಾಸನ : ಹುಲಿಯನ್ನು ಹೊಡೆದುರುಳಿಸಿದ ವೀರ ಹೊಯ್ಸಳನ ಕಥೆಯನ್ನು ಎಲ್ಲರೂ ಕೇಳಿದ್ದೀರ. ಇದೀಗ ಹೊಯ್ಸಳರ ನಾಡು ಹಾಸನದಲ್ಲಿ ಬಾಲಕನೊಬ್ಬ ತನ್ನ ತಾಯಿಯ ಪ್ರಾಣ ಉಳಿಸಲು ಚಿರತೆಯನ್ನು ಹಿಮ್ಮೆಟ್ಟಿಸಿದ ಸಾಹಸಗಾಥೆ ಇದು.
ಕಾಡಿನಿಂದ ನಾಡಿಗೆ ಆಗಮಿಸಿದ ಚಿರತೆ ಅರಸೀಕೆರೆಯ ಬೈರಗೊಂಡನಹಳ್ಳಿ ಭೊವಿ ಕಾಲೋನಿಗೆ ಆಗಮಿಸಿತು. ಜನರನ್ನು ಕಂಡು ಗಾಬರಿಗೊಂಡ ಚಿರತೆ ಏಕಾಏಕಿ ಜನರ ಮೇಲೆ ದಾಳಿ ನಡೆಸಲು ಪ್ರಾರಂಭಿಸಿತು.
ಜಮೀನಿಗೆ ತೆರಳುತ್ತಿದ್ದ ಚಂದ್ರಮ್ಮ ಎಂಬವರ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿತು. ತಾಯಿ ಮೇಲೆ ಚಿರತೆ ದಾಳಿ ನಡೆಸುತ್ತಿರುವುದನ್ನು ಕಂಡ ಕಿರಣ್ ಚಿರತೆ ಮೇಲೆ ಎರಗಿದ. ಸುಮಾರು 15 ನಿಮಿಷಗಳ ಕಾಲ ಚಿರತೆಯೊಂದಿಗೆ ಸೆಣಸಾಟ ನಡೆಸಿದ. ಚಿರತೆಯ ಕುತ್ತಿಗೆಯನ್ನು ಬಲವಾಗಿ ಹಿಡಿದುಕೊಂಡ ಹಿನ್ನೆಲೆಯಲ್ಲಿ ಚಿರತೆಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿ ಸ್ಥಳದಿಂದ ಪರಾರಿಯಾಗಿದೆ.
ತಾಯಿ ಹಾಗೂ ಮಗನ ಮೇಲೆ ದಾಳಿಯ ನಂತರ ಚಿರತೆಯು ಪಶು ವೈದ್ಯಾಧಿಕಾರಿ ಡಾ.ಮುರಳಿ ಮೇಲೆ ದಾಳಿ ಮಾಡಿ ಆ ನಂತರ ಬೆಂಡೇಕೆರೆ ತಾಂಡ್ಯ ಸಮೀಪ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ಚಿರತೆ ತಲೆಗೆ ತೀವ್ರ ತರವಾದ ಪೆಟ್ಟು ಸ್ಥಳದಲ್ಲಿಯೇ ಮೃತಪಟ್ಟಿದೆ. ಗಾಯಗೊಂಡ ತಾಯಿ, ಮಗನನ್ನು ಹಾಸನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.