ಕುಂದಾಪುರ: ಕಣಜದ ಗೂಡಿಗೆ ಹದ್ದು ದಾಳಿ ನಡೆಸಿದ ಪರಿಣಾಮ ಚೆಲ್ಲಾಪಿಲ್ಲಿಯಾದ ಕಣಜದ ಹುಳುಗಳು ಸುತ್ತಮುತ್ತಲಿದ್ದ ಜನರ ಮೇಲೆ ದಾಳಿ ಮಾಡಿ, ವ್ಯಕ್ತಿಯೋರ್ವರು ಸಾವನ್ನಪ್ಪಿ ಹಲವರು ಗಾಯಗೊಂಡ ಘಟನೆ ಕುಂದಾಪುರ ತಾಲೂಕಿನ ಬಸ್ರೂರು ಎಂಬಲ್ಲಿ ನಡೆದಿದೆ.
ಕಣಜದ ಹುಳುವಿನ ದಾಳಿಗೆ ತುತ್ತಾಗಿ ಸಾವನ್ನಪ್ಪಿದ ವ್ಯಕ್ತಿಯನ್ನು ಸ್ಥಳೀಯ ಬಸ್ರೂರು ನಿವಾಸಿ, ಐಡಿಯಲ್ ಇಲೆಕ್ಟ್ರಿಕಲ್ಸ್ ನ ಜೀವನ ನಾಯಕ್ (72) ಎಂದು ಗುರುತಿಸಲಾಗಿದೆ. ಜೀವನ್ ನಾಯಕ್ ಗೆ ಹಲವು ಕಣಜದ ಹುಳುಗಳು ಕಚ್ಚಿದ್ದು ಗಂಭೀರ ಗಾಯಗೊಂಡಿದ್ದ ಅವರನ್ನು ಕೆಎಂಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬಸ್ರೂರಿನ ಬಿಎಸ್ಎನ್ಎಲ್ ಕಚೇರಿಯ ಹಿಂಬದಿಯಲ್ಲಿ ಇದ್ದ ಮರದಲ್ಲಿ ಬೃಹತ್ ಗಾತ್ರದ ಕಣಜದ ಗೂಡಿತ್ತು. ಈ ಗೂಡಿಗೆ ಹದ್ದೊಂದು ದಾಳಿ ನಡೆಸಿದ ಪರಿಣಾಮ ಬಸ್ರೂರು ಪೇಟೆಯಲ್ಲಿದ್ದ ಸಾರ್ವಜನಿಕರಿಗೆ ಮತ್ತು ಸ್ಥಳೀಯವಾಗಿ ನಿಲ್ಲಿಸಿದ್ದ ರಿಕ್ಷಾ ಚಾಲಕರಿಗೆ, ಅಲ್ಲಿಯೇ ಸಮೀಪದಲ್ಲಿದ್ದ ಕ್ಲಿನಿಕ್ಗೆ ಬಂದಿದ್ದ ರೋಗಿಗಳಿಗೆ ದಾಳಿ ನಡೆಸಿವೆ. ಇದೇ ಸಂದರ್ಭ ಪುಟ್ಟ ಮಗುವಿಗೂ ಹುಳಗಳು ದಾರಿ ನಡೆಸಿದಾಗ ತಪ್ಪಿಸಲು ಬಂದ ಸ್ಥಳೀಯ ಐಡಿಯಲ್ ಎಲೆಕ್ಟ್ರಿಕಲ್ಸ್ ಅಂಗಡಿಯ ಮಾಲೀಕ ಜೀವನ ನಾಯಕ್ ಅವರಿಗೆ ಕಣಜದ ಹುಳಗಳು ಕಚ್ಚಿವೆ ಜೊತೆಗೆ ಮಗುವಿಗೂ ಕಚ್ಚಿದ್ದು, ಮಗು ಗಂಭೀರವಾಗಿದೆ ಎಂದು ತಿಳಿದುಬಂದಿವೆ.