ಮಡಿಕೇರಿ : ಪೊನ್ನಂಪೇಟೆ ತಾಲೂಕಿನ ಜನರ ನಿದ್ದೆಗೆಡಿಸಿರುವ ನರಹಂತಕ ಹುಲಿಯ ಸೆರೆಗಾಗಿ ಅರಣ್ಯ ಇಲಾಖೆ ಪ್ರಯತ್ನ ಮುಂದುವರೆದಿದೆ. 150ಕ್ಕೂ ಅಧಿಕ ಸಿಬ್ಬಂದಿಗಳು ಹಗಲಿರುಳೂ ಶ್ರಮಿಸುತ್ತಿದ್ದಾರೆ. ಆದರೆ, ಹುಲಿಯನ್ನು ಇದುವರೆಗೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.ಫೆಬ್ರವರಿ 21ರಿಂದ ಕಾರ್ಯಾಚರಣೆ ನಡೆಯುತ್ತಿದ್ದರೂ ಹುಲಿ ಪತ್ತೆಯಾಗಿಲ್ಲ. ಆದರೆ, ಪ್ರತಿ ದಿನ ಅಥವಾ ಎರಡು ದಿನಗಳಿಗೊಮ್ಮೆ ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತ್ತಿದೆ.

ಈ ನಡುವೆ ಗ್ರಾಮಸ್ಥರ ಆಕ್ರೋಶವೂ ಹೆಚ್ಚಾಗುತ್ತಿದೆ. ಗುರುವಾರ ಜನರೇ ಸ್ವಯಂ ಪ್ರೇರಿತರಾಗಿ ಪೊನ್ನಂಪೇಟೆ ತಾಲೂಕು ಬಂದ್ ಮಾಡಿದ್ದರು. ಕೊಡಗು ಜಿಲ್ಲೆಯ ಶಾಸಕರುಗಳಾದ ಅಪ್ಪಚ್ಚು ರಂಜನ್, ಕೆ. ಜಿ. ಬೋಪಯ್ಯ ಮತ್ತು ಎಂಎಲ್ಸಿ ವೀಣಾ ಅಚ್ಚಯ್ಯ ಸದನದಲ್ಲಿಯೂ ಈ ಕುರಿತು ವಿಷಯ ಪ್ರಸ್ತಾಪಿಸಿದ್ದಾರೆ.ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಹುಲಿ ಸೆರೆ ಸಾಧ್ಯವಾಗದಿದ್ದರೆ ಗುಂಡಿಟ್ಟು ಕೊಲ್ಲುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಜಿಲ್ಲಾ ರೈತ ಸಂಘವೂ ಕಳೆದ 5 ದಿನಗಳಿಂದ ನಿರಂತರವಾಗಿ ಧರಣಿ ನಡೆಸುತ್ತಿದೆ, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದೆ.

ಗುರುವಾರ ಪ್ರತಿಭಟನಾ ನಿರತರನ್ನು ಭೇಟಿ ಮಾಡಿದ ಮೂವರೂ ಜನಪ್ರತಿನಿಧಿಗಳು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಶಾಸಕ ಅಪ್ಪಚ್ಚು ರಂಜನ್ ಹುಲಿಯನ್ನು ಕೊಲ್ಲುವಂತೆ ಗ್ರಾಮಸ್ಥರಿಗೆ ಧೈರ್ಯ ನೀಡಿದರಲ್ಲದೆ, ಕೊಂದ ನಂತರ ತಮಗೆ ದೂರವಾಣಿ ಕರೆ ಮಾಡಿ ತಿಳಿಸಿದರೆ ತಾವು ಕೊಂದವರಿಗೆ ರಕ್ಷಣೆ ನೀಡುವುದಾಗಿಯೂ ಭರವಸೆ ನೀಡಿದ್ದಾರೆ.ಶಾಸಕರ ಈ ಮಾತಿನ ವಿಡಿಯೋ ಈಗ ವೈರಲ್ ಆಗಿದೆ. ಅರಣ್ಯ ಇಲಾಖೆಯ ಪಿಸಿಸಿಎಫ್ ಹುಲಿ ಸೆರೆ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯಾಧಿಕಾರಿಗಳಿಗೆ ಹುಲಿ ಸೆರೆ ಹಿಡಿಯಲು ಸಾಧ್ಯವಾಗದಿದ್ದರೆ ಮಾತ್ರ ಕೊಲ್ಲಬೇಕೆಂದು ಆದೇಶಿಸಿದ್ದಾರೆ.ಅದರಲ್ಲೂ ಕೊಲ್ಲುವುದು ಕಡೇ ಆಯ್ಕೆ ಆಗಿರಬೇಕೆಂದು ಸ್ಪಷ್ಟವಾಗಿದೇ ತಿಳಿಸಿದ್ದಾರೆ. ಇದೀಗ ಶಾಸಕರೇ ನೇರವಾಗಿ ಗುಂಡು ಹೊಡೆಯಿರಿ ಎಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ.

ಅರಣ್ಯ ಇಲಾಖೆಯು ಈ ಹಿಂದೆ ಬೆಳೆ ನಾಶ ಮಾಡುತ್ತಿರುವ ಹಂದಿಗಳನ್ನು ಕೊಲ್ಲಲು ರೈತರಿಗೆ ಅನುಮತಿ ನೀಡಿದೆ. ಆದರೆ, ಕೊಲ್ಲಬೇಕಾದರೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಅನುಮತಿ ಪಡೆದುಕೊಂಡು ಕೊಲ್ಲಬೇಕಿದೆ. ಕೊಂದ ನಂತರ ಅದರ ದೇಹವನ್ನು ಅರಣ್ಯ ಇಲಾಖೆಗೆ ಒಪ್ಪಿಸಬೇಕಿದೆ.ಹೀಗಿರುವಾಗ ಹುಲಿಯೊಂದನ್ನು ಕೊಲ್ಲಲು ಶಾಸಕರೇ ಕರೆ ನೀಡಿರುವುದು ಆಶ್ಚರ್ಯಕರವಾಗಿದೆ. ಆದರೆ, ಗ್ರಾಮಸ್ಥರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹುಲಿ ಹಿಡಿಯುವ ಇಲಾಖೆಯ ಕಾರ್ಯಾಚರಣೆಯಲ್ಲಿ ನುರಿತ ಬೇಟೆಗಾರರಾದ ಗ್ರಾಮಸ್ಥರನ್ನು ಕರೆದುಕೊಳ್ಳುವಂತೆ ರೈತ ಸಂಘ ಒತ್ತಾಯಿಸಿದೆ.

ಈ ನಡುವೆ ಹುಲಿ ಕಾಣಿಸಿಕೊಂಡ ಕೂಡಲೇ ವಾಟ್ಸ್ ಅಪ್ ಸಂದೇಶದ ಮೂಲಕ ಗ್ರೂಪ್ ಗಳಲ್ಲಿ ಹಾಕುತ್ತಿರುವುದರಿಂದ ಹುಲಿ ನೋಡಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿರುವುದರಿಂದ ಜನರ ಗದ್ದಲಕ್ಕೆ ಹುಲಿಯು ಮತ್ತೆ ಬರುತ್ತಿಲ್ಲ. ಜನರ ಗದ್ದಲವಿಲ್ಲದ ಪ್ರದೇಶಕ್ಕೆ ಹೋಗಿ ಜಾನುವಾರುಗಳನ್ನು ಕೊಲ್ಲುತ್ತಿದೆ. ಹುಲಿ ಕಂಡವರು ಯಾರಿಗೂ ತಿಳಿಸದೆ ಅರಣ್ಯ ಇಲಾಖೆಗೆ ಮಾತ್ರ ತಿಳಿಸುವಂತೆ ಅರಣ್ಯಾಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.










