ಮಂಗಳೂರು: ಇಂದಿರಾಗಾಂಧಿ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ವಂದೇಮಾತರಂ ಘೋಷಣೆ ಕೂಗುತ್ತಾ ಪ್ರತಿಭಟನೆ ಮಾಡಿದ ಕಾರಣಕ್ಕೆ ಜೈಲುವಾಸ ಶಿಕ್ಷೆ ಅನುಭವಿಸಿ ಕಳಪೆ ಆಹಾರವನ್ನು ಸೇವಿಸುವ ಪರಿಸ್ಥಿತಿ ಬಂದಾಗಲೂ ಜೈಲಿನಲ್ಲಿ ಸ್ವಾತಂತ್ರ್ಯ ಯೋಧರ ಕಥೆಗಳನ್ನು ವಾಚಿಸುತ್ತಾ, ಜೈಲಿನಲ್ಲಿಯೇ ಸಂಘದ ಶಾಖೆ ಮಾಡುತ್ತಾ, ಭಜನೆಗಳನ್ನು ಹಾಡುತ್ತಾ ಕಳೆದ ದಿನಗಳನ್ನು ಹಿರಿಯರು ಹೇಳುವಾಗ ರೋಮಾಂಚನವಾಗುತ್ತದೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಮರಕಡ ವಾರ್ಡಿನ ಲೀಲಾ ನಲ್ಲೂರಾಯ, ಕುಳಾಯಿಯ ವಿಷ್ಣುಮೂರ್ತಿ ಹಾಗೂ ಕಾವೂರು 18 ನೇ ವಾರ್ಡಿನ ಉಮೇಶ್ ಶೆಣೈ ಅವರ ಮನೆಗಳಿಗೆ ಭೇಟಿ ನೀಡಿ ಅಲ್ಲಿ ಹಿರಿಯರ ಜೊತೆ ಮಾತನಾಡಿ ಅವರ ತ್ಯಾಗವನ್ನು ಅಭಿನಂದಿಸಿ ಅವರನ್ನು ಸನ್ಮಾನಿಸಿದರು.
ಶಾಸಕರೊಂದಿಗೆ ಭಾಜಪಾ ಉತ್ತರ ಮಂಡಲ ಅಧ್ಯಕ್ಷ ತಿಲಕರಾಜ್ ಕೃಷ್ಣಾಪುರ, ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ, ಉಪಮೇಯರ್ ಸುಮಂಗಲಾ, ಮನಪಾ ಸದಸ್ಯರಾದ ಲೋಹಿತ್ ಅಮೀನ್, ವೇದಾವತಿ, ವರುಣ್ ಚೌಟ, ಗಾಯತ್ರಿ ರಾವ್, ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ಮಂಡಲ ಉಪಾಧ್ಯಕ್ಷ ವಿಠಲ ಸಾಲಿಯಾನ್, ಪಕ್ಷದ ಪ್ರಮುಖರಾದ ಪ್ರಶಾಂತ್ ಪೈ, ಹರೀಶ್ ಶೆಟ್ಟಿ, ಪ್ರೇಮ್ ಚಂದ್ರರಾವ್, ಚಂದ್ರಶೇಖರ್ ಶೇಣವ, ಉಪಸ್ಥಿತರಿದ್ದರು.