ಮಂಜೇಶ್ವರ: ಮಂಜೇಶ್ವರದಲ್ಲಿ ಕಾಂಗ್ರೆಸ್ ಮತದಲ್ಲಿ ಸೋರಿಕೆಯಾಗಿದೆ ಎಂದು ಮುಸ್ಲಿಮ್ ಲೀಗ್ ಶಂಕೆ ವ್ಯಕ್ತಪಡಿಸಿದ್ದು, ಯುಡಿಎಫ್ ಗೆ ಲಭಿಸುತ್ತಿದ್ದ ಪರಂಪರಾಗತ ಮತಗಳು ಬಿಜೆಪಿ ಪಾಳಯಕ್ಕೆ ಬಿದ್ದಿದೆ ಎಂದು ಲೀಗ್ ಹೇಳಿದೆ.
ಇಲ್ಲಿ ಯುಡಿಎಫ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುವ ಎಲ್ಲ ಲಕ್ಷಣಗಳು ಗೋಚರಿಸಿವೆ. ಕಾಂಗ್ರೆಸ್ ಪ್ರಭಾವದ ವರ್ಕಾಡಿ, ಮೀಂಜಂ, ಪೈವಳಿಕೆ , ಪುತ್ತಿಗೆ ಪಂಚಾಯತ್ನ ಮತಗಳು ಬಿಜೆಪಿಗೆ ಹೋಗಿದೆ ಎಂದು ಲೀಗ್ ಲೆಕ್ಕಾಚಾರ ತಿಳಿಸಿದೆ.
ಕಳೆದ ಪಂಚಾಯತ್ ಚುನಾವಣೆಯಲ್ಲಿ ಹದಿನೈದು ವರ್ಷಗಳಿಂದ ಮೀಂಜ ಪಂಚಾಯತ್ನಲ್ಲಿ ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್ ಈ ಬಾರಿ ಸೋಲೊಪ್ಪುವ ಮೂಲಕ ಕಳೆದು ಕೊಂಡಿತ್ತು. ಬ್ಲಾಕ್ ಪಂಚಾಯತ್ನಲ್ಲಿ ಕಾಂಗ್ರೆಸ್ನ ಯಾವ ಅಭ್ಯರ್ಥಿಯೂ ಗೆದ್ದಿಲ್ಲ. ವರ್ಕಾಡಿ, ಪೈವಳಿಕೆ ಕೂಡ ಕಾಂಗ್ರೆಸ್ ಕಳಕೊಂಡಿದೆ. ಇದರ ಹಿಂದೆ ಯುಡಿಎಫ್ ಅಭ್ಯರ್ಥಿ ಕಾರಣ ಎಂದು ಕಾಂಗ್ರೆಸ್ ನಾಯಕರು ಕೂಡ ಆರೋಪಿಸಿದ್ದರು.
ಕಳೆದ ಚುನಾವಣೆಯಲ್ಲಿ ದಕ್ಷಿಣ ಕನ್ನಡಕ್ಕೆ ಹತ್ತಿರವಿರುವ ಮಂಜೇಶ್ವರ ಕ್ಷೇತ್ರದಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರು ಪ್ರಚಾರ ಮಾಡಿದ್ದರು. ಈ ಸಲ ಕರ್ನಾಟಕದಿಂದ ಯಾವ ನಾಯಕರು ಬಂದಿಲ್ಲ. ಫೀಲ್ಡ್ ವರ್ಕ್ ಸಾರ್ವಜನಿಕ ಸಭೆಗಳಲ್ಲಿ ಕೂಡ ಕಾಂಗ್ರೆಸ್ ನಾಯಕರ ಅನುಪಸ್ಥಿತಿ ಇತ್ತು. ರಾಹುಲ್ ಗಾಂಧಿ ಪ್ರಿಯಾಂಕಾಗಾಂಧಿ ಇವರಲ್ಲಿ ಒಬ್ಬರನ್ನು ಮಂಜೇಶ್ವರಕ್ಕೆ ಕರೆತರಬೇಕೆಂಬ ಮುಸ್ಲಿಂ ಲೀಗಿನ ಯತ್ನವೂ ವಿಫಲವಾಗಿದೆ.
ಒತ್ತಡದಿಂದ ಕೊನೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರವರ ನೇತೃತ್ವದ ರೋಡ್ ಶೋ ಕ್ಕೆ ಕರೆ ನೀಡಲಾಯಿತಾದರೂ ಅದು ಕೂಡ ಆಗಲಿಲ್ಲ. ಅಲ್ಲದೇ, ಈ ಮಧ್ಯೆ ಮುಸ್ಲಿಂ ಧಾರ್ಮಿಕ ಮುಖಂಡ ಅಲಿಕುಂಞಿ ಉಸ್ತಾದ್ ರವರು ನಿಧನರಾದ ಹಿನ್ನೆಲೆಯಲ್ಲಿ ರಾಲಿ ಮೊಟಕುಗೊಳಿಸಲಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರ ಕಾರ್ಯಕ್ರಮ ಸೀಮಿತವಾಗಿತ್ತು.
ಅಲಿಕುಂಞಿ ಉಸ್ತಾದ್ ರ ನಿಧನಕ್ಕೆ ಗೌರವವಾಗಿ ರಾಲಿ ಮಾಡುವುದರಿಂದ ಹಿಂದೆ ಸರಿದಿದ್ದಾಗಿ ಯುಡಿಎಫ್ ಅಭ್ಯರ್ಥಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಉದುಮದಲ್ಲಿ ಕಾಂಗ್ರೆಸ್ ಗೆ ಕೆಲವು ಮತಗಳು ಸಿಕ್ಕಿರಬಹುದು ಎಂಬ ಶಂಕೆಯನ್ನು ಲೀಗ್ ಮುಖಂಡರು ವ್ಯಕ್ತಪಡಿಸಿದ್ದಾರೆ.