ನವದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ಹೆಚ್ಚಾಗುತ್ತಿದ್ದು, ದಿನೇ ದಿನೇ ಲಕ್ಷಾಂತರ ಪ್ರಕರಣಗಳು ವರದಿಯಾಗುತ್ತಿವೆ. ಈ ಮಧ್ಯೆ ಕೊರೊನಾ ರೋಗಿಗಳಿಗೆ ಆಕ್ಸಿಜನ್ ಪೂರೈಕೆಯಲ್ಲಿ ಸಮಸ್ಯೆ ಎದುರಾಗಿರುವ ಬಗ್ಗೆ ವರದಿಗಳಾಗುತ್ತಿವೆ. ಹೀಗಾಗಿ ಕೇಂದ್ರ ಸರ್ಕಾರ ಆಕ್ಸಿಜನ್ ಪೂರೈಕೆಗೆ ಕ್ರಮಗಳನ್ನ ಕೈಗೊಳ್ಳುತ್ತಿದೆ.
ಈಗಾಗಲೇ ಕ್ರಯೋಜೆನಿಕ್ ಟ್ಯಾಂಕ್ಗಳ ಮೂಲಕ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆ ಮಾಡಲು ಭಾರತೀಯ ರೇಲ್ವೆ ಆಕ್ಸಿಜನ್ ಎಕ್ಸ್ಪ್ರೆಸ್ ಎಂಬ ವಿಶೇಷ ರೈಲು ಸೇವೆ ಆರಂಭಿಸಿದೆ. ಕಳೆದ ರಾತ್ರಿ ಮೊದಲ ಆಕ್ಸಿಜನ್ ಎಕ್ಸ್ಪ್ರೆಸ್ ವೈಜಾಗ್ನಿಂದ ಮಹಾರಾಷ್ಟ್ರದತ್ತ ತೆರಳಿದೆ. ಇದೀಗ ಆಕ್ಸಿಜನ್ ಟ್ಯಾಂಕ್ಗಳನ್ನ ಫಿಲ್ಲಿಂಗ್ ಸ್ಟೇಷನ್ಗಳಿಗೆ ಕೊಂಡೊಯ್ಯಲು ಭಾರತೀಯ ವಾಯುಪಡೆ ನೆರವಿಗೆ ಧಾವಿಸಿದೆ.
ಐಎಎಫ್ ವಿಮಾನಗಳ ಮೂಲಕ ಖಾಲಿ ಕ್ರಯೋಜೆನಿಕ್ ಆಕ್ಸಿಜನ್ ಟ್ಯಾಂಕರ್ಗಳನ್ನ ಏರ್ಲಿಫ್ಟ್ ಮಾಡಲಾಗಿದೆ. ಎರಡು ಐಎಎಫ್ C-17 ವಿಮಾನಗಳು ಹಾಗೂ ಒಂದು IL-76 ವಿಮಾನದ ಮೂಲಕ ನಿನ್ನೆ ಪಾನಾಘಡದಿಂದ ಆಕ್ಸಿಜನ್ ಕಂಟೇನರ್ಗಳನ್ನ ಹೊತ್ತೊಯ್ಯಲಾಗಿದೆ.
ಇದಲ್ಲದೇ ವೈದ್ಯಕೀಯ ಸಿಬ್ಬಂದಿ, ಉಪಕರಣಗಳು ಹಾಗೂ ಔಷಧಿಗಳನ್ನ ದೇಶಾದ್ಯಂತ ಕೋವಿಡ್ ಆಸ್ಪತ್ರೆಗಳಿಗೆ ರವಾನಿಸಲು ಐಎಎಫ್ ನೆರವಾಗುತ್ತಿದೆ.
ದೇಶದಲ್ಲಿ ಸಾಕಷ್ಟು ಆಮ್ಲಜನಕ ಲಭ್ಯವಿದ್ದರೂ ಅದನ್ನು ಸಾಗಿಸಲು ಬೇಕಾದ ಕಂಟೇನರ್ಗಳ ತೀವ್ರ ಕೊರತೆಯಿದೆ ಹಾಗೂ ಸಾರಿಗೆಯ ಸಮಸ್ಯೆ ಇದೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆಯೊಂದು ವರದಿ ಮಾಡಿದೆ. ಹೀಗಾಗಿ ಈ ಸಮಸ್ಯೆ ನಿವಾರಿಸಲು ಈಗ ಹಲವು ಕ್ರಮಗಳನ್ನ ಕೇಂದ್ರ ಕೈಗೊಳ್ತಿದೆ.