ದೆಹಲಿ: ಕೇರಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೆರವಣಿಗೆಯಲ್ಲಿ ಆರ್.ಎಸ್.ಎಸ್ ಕಾರ್ಯಕರ್ತರನ್ನು ಕೋಳ ತೊಡಿಸಿ ಅವಮಾನಿಸಿದ ಅಣಕು ಸನ್ನಿವೇಶ ಬಗ್ಗೆ ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿದೆ. ಇಂತಹಾ ಆಕ್ಷೇಪಾರ್ಹ ಚಿಂತನೆಯುಳ್ಳ ಸಂಘಟನೆಯ ವಿರುದ್ದ ಕಾನೂನು ಕ್ರಮ ಅನಿವಾರ್ಯ ಎಂದು ಬಿಜೆಪಿ ನಾಯಕರು ಅಭಿಪ್ರಾಯ ಮಂಡಿಸಿದ್ದಾರೆ.

ಕೇರಳದಲ್ಲಿನ ಪಿಎಫ್ಐನ ಈ ವಿವಾದಾತ್ಮಕ ಕಾರ್ಯಕ್ರಮದ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಪಿಎಫ್ಐ ನಡೆಯನ್ನು ಉಗ್ರವಾಗಿ ಖಂಡಿಸಿದ್ದಾರೆ. ಇಂತಹಾ ಪ್ರಸಂಗಗಳು ನಮ್ಮ ದೇಶದಲ್ಲಿ ಈಗಿನದ್ದೇನಲ್ಲಾ, 7ನೇ ಶತಮಾನದಿಂದಲೂ ಆಕ್ರಮಣಕಾರಿ ಮನಸ್ಥಿತಿಯುಳ್ಳವರು ಈ ರೀತಿಯ ಕೃತ್ಯಗಳನ್ನು ನಡೆಸುತ್ತಲೇ ಬಂದಿದ್ದಾರೆ. ಘಜನಿ, ಘೋರಿ, ಬಾಬರ್ ಸಹಿತ ಅನೇಕರು ಹಾಗೂ ಅವರ ಅನುಯಾಯಿಗಳು ಈ ರೀತಿಯಲ್ಲೇ ನಡೆದುಕೊಂಡಿದ್ದರು. ಅವರನ್ನೇ ಅನುಸರಿಸುತ್ತಿರುವವರು ಈಗಲೂ ಅದೇ ರೀತಿ ಅಮಾನವೀಯ ಹಾದಿಯಲ್ಲಿದ್ದಾರೆ ಎಂದು ಸಿ.ಟಿ.ರವಿ ವಿಶ್ಲೇಷಿಸಿದರು.

ಆರ್.ಎಸ್.ಎಸ್ ಸಂಘಟನೆ ಎಂದೂ ಯಾವುದೇ ಧರ್ಮದ ವಿರೋಧಿಯಾಗಿ ನಡೆದುಕೊಂಡಿಲ್ಲ. ದೇಶ ಭಕ್ತಿಯ ಶಿಕ್ಷಣ ನೀಡಿ ನಗುನಗುತ್ತಲೇ ಜನರಲ್ಲಿ ಒಗ್ಗಟ್ಟು ಮೂಡಿಸಿ ದೇಶ ಕಟ್ಟುತ್ತಿದೆ. ಇದನ್ನು ಸಹಿಸಲಾಗದವರು ಈ ರೀತಿ ದೇಶವಿರೋಧಿಯಾಗಿ ವರ್ತಿಸುತ್ತಿದ್ದಾರೆ ಎಂದು ಸಿ.ಟಿ.ರವಿ ಆರೋಪಿಸಿದ್ದಾರೆ.

ಸರ್ಕಾರ ಕ್ರಮ ಕೈಗೊಳ್ಳಲಿ: ದೇಶ ಕಟ್ಟುವ ಕೆಲಸಕ್ಕೆ ಅಡ್ಡಿಪಡಿಸುವುದನ್ನು ಸಹಿಸಲಾಗದು ಎಂದಿರುವ ಸಿ.ಟಿ.ರವಿ, ಪಿಎಫ್ಐ ಉದ್ದೇಶವು ಮತ್ತೊಮ್ಮೆ ದೇಶ ಒಡೆಯುವುದೇ ಆಗಿದೆ ಅದಕ್ಕೆ ಇರುವ ಅಡ್ಡಿ ಆರ್.ಎಸ್.ಎಸ್ ಆಗಿದೆ. ಹಾಗಾಗಿ ಆ ಸಂಘಟನೆ ಸಂಘಪರಿವಾರದ ವಿರುದ್ದ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದರು. ಮಂಗಳೂರು ಘಟನೆಯನ್ನಾಧರಿಸಿ ಕರ್ನಾಟಕ ಸರ್ಕಾರ ಕಾನೂನು ಕ್ರಮಕ್ಕೆ ಮುಂದಾಗಿರುವುದು ಸರಿಯಾದ ಕ್ರಮವಾಗಿದೆ. ಅದೇ ರೀತಿ ಕೇರಳ ಸರ್ಕಾರವೂ ಕ್ರಮ ಕೈಗೊಳ್ಳಬೇಕಿದೆ ಎಂದಿದ್ದಾರೆ.











