ವಿಶಾಲವಾಗಿ ಹಬ್ಬಿ ಬೆಳೆಯುವ ಆಲದಮರದ ಕೆಳಗೆ ಬೇರೆ ಏನೂ ಬೆಳೆಯುವುದಿಲ್ಲ ಎಂಬುದೊಂದು ಪ್ರತೀತಿ. ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ, ಹುಟ್ಟಿಬಂದ ವಿಟ್ಲದ ಮಹಾನ್ ಹಿರಿಯ ಕೊಳಲು ವಾದಕರು ದಿ.ಪಂಡಿತ್ ದೇವದಾಸ್ ಪ್ರಭು. ಅವರ ಪ್ರತಿಭೆ ಎಂತಹ ಉಜ್ಜಲವಾದುದೆಂದರೆ ಕರ್ನಾಟಕ ಸಂಗೀತಕ್ಷೇತ್ರದಲ್ಲಿ ಹೇಳತೀರದಷ್ಟು.
ದಿ.ಪಂಡಿತ್ ದೇವದಾಸ್ ಪ್ರಭು ಅವರಿಂದ ಕೊಳಲುವಾದನವನ್ನು ಕಲಿತು ಶ್ರೇಷ್ಠ ಮಟ್ಟಕ್ಕೆ ತಲುಪಿದ ಶಿಷ್ಯರು ಸಾವಿರಕ್ಕೂ ಅಧಿಕ. ಅವರ ಮಾರ್ಗದರ್ಶನ, ತರಭೇತಿಯೊಂದಿಗೆ ಇತ್ತೀಚೆಗೆ ಕೊಳಲುವಾದನದ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆಯುತ್ತಿರವ ವಿಟ್ಲದ ಪ್ರತಿಭೆ ಸಂತೋಷ್ ವಿಟ್ಲ.
ಶ್ರೀಕೃಷ್ಣನ ಕೈಯಲ್ಲೂ ಇದ್ದ ಕೊಳಲು ಕೆಲವು ತೂತು(ರಂಧ್ರ)ಗಳಿರುವ ಬಿದಿರಿನ ಓಟೆ ಮಾತ್ರ. ಅದಕ್ಕೆ ಜೀವ ತುಂಬುವುದು ವಿಶೇಷವಾಗಿ ನುಡಿಸುವಾತನ ಸಾಮರ್ಥ್ಯವನ್ನು ಅವಲಂಬಿಸಿದೆ. ಸಂತೋಷ್ ವಿಟ್ಲ ಕೊಳಲು ವಾದನ ಕ್ಷೇತ್ರದಲ್ಲಿ ಏನಾದ್ರೂ ಸಾಧಿಸಬೇಕು ಎನ್ನುವ ಗುರಿಯೊಂದಿಗೆ ಛಲ ಬಿಡದೆ ಕಲಿತ ವಿದ್ಯೆ ಎಂದರೆ ಅದು ಕೊಳಲುವಾದನ ಕ್ಷೇತ್ರ. ಕೊಳಲು ಕೈಯಲ್ಲಿದ್ದರೆ ಶ್ರೀ ಕೃಷ್ಣ ಪರಮಾತ್ಮನೇ ಒಲಿದ ಎಂಬಂತೆ ನಾನಾ ವಿಧಧ ಸ್ವರಗಳನ್ನು ಕೊಳಲಿನಿಂದ ಹೊರಚಿಮ್ಮಿಸುವ ಕೊಳಲು ಮಾಂತ್ರಿಕ.
ಸಂತೋಷ್ ವಿಟ್ಲ ಚೆಕ್ಕಿದಕಾಡು ನಿವಾಸಿ ವಾಸು ಸಿ.ಎಚ್ ಮತ್ತು ಸುಶೀಲ ದಂಪತಿಗಳ ಪುತ್ರ. ಸಣ್ಣ ವಯಸ್ಸಿನಿಂದಲೇ ಕೊಳಲುವಾದನ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ ಸಂತೋಷ್ ಸತತ ೮ ವರ್ಷಗಳ ಕಾಲ ದಿ.ಪಂಡಿತ್ ದೇವದಾಸ್ ಪ್ರಭು ವಿಟ್ಲ ಇವರಿಂದ ಕೊಳಲು ತರಭೇತಿ ಪಡೆದಿದ್ದಾರೆ. ನಂತರದ ದಿನಗಳಲ್ಲಿ ಕೊಳಲು ತರಬೇತಿಯನ್ನು ಪಡೆಯುತ್ತಲೇ ಕೆಲವೊಂದು ವೇದಿಕೆಗಳಲ್ಲಿ ತಮ್ಮ ಕೊಳಲುವಾದನ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಕ್ರಮೇಣ ನುರಿತ ಕೊಳಲುವಾದಕರಾಗಿ ಸುಮಾರು ೧೦೦೦ ಕ್ಕೂ ಅಧಿಕ ದೊಡ್ಡ ವೇದಿಕೆಗಳಲ್ಲಿ ಪ್ರಸಿದ್ದ ಸಂಗೀತ ತಂಡದೊಂದಿಗೆ ಕೊಳಲು ವಾದನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ.
ಕನ್ನಡ ಸಿನಿಮಾ ಹಾಡುಗಳಲ್ಲಿ ಹಾಗೂ ಸುಮಾರು ೫೦೦ ಕ್ಕೂ ಅಧಿಕ ತುಳು ಕನ್ನಡ ಭಕ್ತಿ ಗೀತೆ, ಭಾವಗೀತೆ ಹಾಗೂ ಹಲವು ವಿಧದ ಹಾಡುಗಳಿಗೆ ತಮ್ಮ ಕೊಳಲುವಾದನ ನುಡಿಸಿದ್ದು ಎಲ್ಲಾ ಹಾಡುಗಳಲ್ಲಿಯೂ ತಮ್ಮ ವಿಭಿನ್ನ ರಿತಿಯ ಹೊಸ ಶೈಲಿಯ ಕೊಳಲು ಧ್ವನಿಯನ್ನು ಅಳವಡಿಸಿದ್ದಾರೆ. ಇತ್ತೀಚೆಗೆ ದಕ್ಷಾ ಕ್ರಿಯೇಷನ್ ಯ್ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಗೊಂಡ ”ಗಾನಗಂಗೆ” ಹಾಗೂ “ಮೈಮೆದ ಪುಂಚ” ಆಲ್ಬಮ್ ಸಾಂಗ್ ಸೇರಿದಂತೆ ಹಲವು ಆಲ್ಬಮ್ ಸಾಂಗ್ಗಳಲ್ಲಿ ತಮ್ಮ ಕೊಳಲುವಾದನ ನುಡಿಸಿದ್ದು, ಜನರು ಪುಲ್ ಫಿದಾಗೊಂಡಿದ್ದು ಎಲ್ಲಾ ಹಾಡುಗಳು ಸೂಪರ್ಹಿಟ್ ಗೊಂಡಿವೆ.
ಅತೀ ಕಿರಿ ವಯಸ್ಸಿನಲ್ಲಿ ಅತೀ ಹೆಚ್ಚು ಶಿಷ್ಯವರ್ಗವನ್ನು ತನ್ನದಾಗಿಸಿಕೊಂಡ ಸಂತೋಷ್ ವಿಟ್ಲದಲ್ಲಿ ಪ್ರತೀ ಭಾನುವಾರ ಕೊಳಲು ತರಗತಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಒಕ್ಕೆತ್ತೂರು ಶಾಲೆಯಲ್ಲಿ, ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಮತ್ತು, ಪದವಿ ಶಿಕ್ಷಣವನ್ನು ಸರಕಾರಿ ಪದವಿ ಕಾಲೇಜು ವಿಟ್ಲದಲ್ಲಿ ಮಾಡಿರುತ್ತಾರೆ. ಇವರ ಪ್ರತಿಭೆಯನ್ನು ಗುರುತಿಸಿ ಅನೇಕ ವೇದಿಕೆಗಳು ಸನ್ಮಾನಿಸಿ ಗೌರವಿಸಿದೆ.