


ತಿರುವನಂತಪುರಂ : ಕಾಂಗ್ರೆಸ್ನ ಹಿರಿಯ ನಾಯಕ ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್ ಅವರು ಇತ್ತೀಚೆಗೆ ಭಾರೀ ಸುದ್ದಿಯಲ್ಲಿದ್ದಾರೆ. ಅದರಲ್ಲೂ ಭಾರತದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಂತರ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾಂಗ್ರೆಸ್ ನಾಯಕರಾಗಿದ್ದುಕೊಂಡು ಶಶಿ ತರೂರ್, ಕೇಂದ್ರದ ನರೇಂದ್ರ ಮೋದಿ ಸರ್ಕಾರವು ನಡೆಸಿದ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಕ್ಕಾಗಿ ಅವರ ವಿರುದ್ಧ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೇ ಮೋದಿಯವರನ್ನು ಹೊಗಳಿ ಬರೆದಿದ್ದ ಲೇಖನದಿಂದಲೂ ಸಂಸದ ಭಾರೀ ವಿರೋಧಕ್ಕೆ ಕಾರಣವಾಗಿದ್ದರು. ಆದರೆ ಇದೀಗ ಈ ವಿವಾದಕ್ಕೆ, ಇಂತಹ ಸಂದರ್ಭಗಳಲ್ಲಿ, ತರೂರ್ ಮತ್ತೆ ‘ರಾಷ್ಟ್ರವೇ ಮೊದಲು’ ಎಂಬ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. “ರಾಷ್ಟ್ರ ಸದೃಢವಾಗಿರದಿದ್ದರೆ ಯಾರೂ ಇರಲಾರರು? ರಾಷ್ಟ್ರೀಯ ಭದ್ರತೆಯು ಯಾವುದೇ ರಾಜಕೀಯ ಪಕ್ಷಕ್ಕಿಂತ ಮಿಗಿಲಾಗಿದೆ” ಶಶಿ ತರೂರ್ ಅವರು ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯನ್ನು ಬೆಂಬಲಿಸಿದಕ್ಕಾಗಿ ಭಾರೀ ವಿವಾದ ಸೃಷ್ಟಿಯಾಗಿತ್ತು.
ಈ ಕಾರ್ಯಾಚರಣೆಯು ಏಪ್ರಿಲ್ 22, 2025 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತದ ಪ್ರತಿಕ್ರಿಯೆಯಾಗಿತ್ತು, ಇದರಲ್ಲಿ 26 ಜನರು ಸಾವನ್ನಪ್ಪಿದ್ದರು.ಈ ದಾಳಿಗೆ ಪ್ರತಿಕಾರವಾಗಿ, ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರದಲ್ಲಿ ಸೈನಿಕ ಕಾರ್ಯಾಚರಣೆ ನಡೆಸಿತು, 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಧ್ವಂಸ ಮಾಡಿತು. ಇನ್ನು ಈ ವೇಳೆ ಶಶಿ ತರೂರ್, ಕೇಂದ್ರದ ಬಿಜೆಪಿ ಕೈಗೊಂಡ ನಿರ್ಧಾರಗಳನ್ನು ಶ್ಲಾಘಿಸಿದ್ದರು.








