ವೇಲ್ನಿಂದ ಕತ್ತು ಬಿಗಿದು ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಈ ಘಟನೆ ಬೆಂಗಳೂರು ನಗರದ ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೈದರಾಬಾದ್ ಮೂಲದ ಆಕಾಂಕ್ಷ ಮೃತ ಯುವತಿ. ಬಿಕಾಂ ಪದವಿ ಪಡೆದ ನಂತರ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಆಕಾಂಕ್ಷ, ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡಿಕೊಂಡು ಜೀವನ್ ಭೀಮಾನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆಕಾಂಕ್ಷ ಜೊತೆಯಲ್ಲಿ ಆಕೆಯ ಪ್ರಿಯಕರ ಸಹ ವಾಸವಾಗಿದ್ದನು ಎಂದು ತಿಳಿದು ಬಂದಿದೆ. ಅವನೇ ಕೊಲೆ ಮಾಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಕಳೆದ ಎರಡು ದಿನಗಳಿಂದ ಆಕಾಂಕ್ಷ ಮತ್ತು ಆಕೆಯ ಪ್ರಿಯಕರ ನಡುವೆ ಗಲಾಟೆ ನಡೆಯುತ್ತಿತ್ತು. ನಿನ್ನೆಯೂ ಇಬ್ಬರ ಮಧ್ಯೆ ಗಲಾಟೆ ನಡೆದಿದ್ದು, ಕೋಪದಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿವೆ. ನಂತರ ಅನುಮಾನ ಬಾರದಿರಲಿ ಎಂದು ವೇಲ್ನಿಂದ ಕತ್ತು ಬಿಗಿದು ನೇಣು ಹಾಕಿ ಎಸ್ಕೇಪ್ ಆಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗ್ಗೆ ಆಕಾಂಕ್ಷ ರೂಮ್ಮೇಟ್ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆಕಾಂಕ್ಷ ಪ್ರಿಯಕರನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ಜೀವನ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಿಯಕರನ ಪತ್ತೆಗೆ ಮುಂದಾಗಿದ್ದಾರೆ.