ಮೈಸೂರು: ತಪಾಸಣೆಗಾಗಿ ಸಂಚಾರ ಪೊಲೀಸರು ಅಡ್ಡಗಟ್ಟಿದಾಗ ಕೆಲವರು ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿ ತಪ್ಪಿಸಿಕೊಳ್ಳಲು ಯತ್ನಿಸುವುದು ಸರ್ವೇಸಾಮಾನ್ಯ. ಇಂಥದ್ದೇ ಒಂದು ಸನ್ನಿವೇಶದಲ್ಲಿ ಸಂಚಾರ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಬೈಕ್ ಸವಾರ ಬಿದ್ದು ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ವಿ.ವಿ.ಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ. ಎಚ್.ಡಿ. ಕೋಟೆ ತಾಲೂಕಿನ ಕನ್ನೇನಹಳ್ಳಿ ನಿವಾಸಿ ಸಿವಿಲ್ ಇಂಜಿನಿಯರ್ ದೇವರಾಜು(46) ಮೃತಪಟ್ಟವರು. ರಿಂಗ್ ರಸ್ತೆಯಲ್ಲಿ ತಪಾಸಣೆ ನಡೆಸುತ್ತಿದ್ದ ಪೊಲೀಸರು ಅಡ್ಡಗಟ್ಟಿದಾಗ ದೇವರಾಜು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ಆಯತಪ್ಪಿ ಕೆಳಕ್ಕೆ ಬಿದ್ದಿದ್ದು, ಅದೇ ಸಮಯಕ್ಕೆ ಬರುತ್ತಿದ್ದ ವ್ಯಾನ್ವೊಂದು ಅವರಿಗೆ ಹಿಂದುಗಡೆಯಿಂದ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಪೊಲೀಸರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪೊಲೀಸರ ಗರುಡ ವಾಹನವನ್ನೂ ಉರುಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉದ್ರಿಕ್ತ ಸಾರ್ವಜನಿಕರಿಂದ ಮೂವರು ಪೊಲೀಸರ ಮೇಲೆ ಹಲ್ಲೆ ನಡೆದಿದ್ದು, ಪೊಲೀಸ್ ವಾಹನ ಸಂಪೂರ್ಣ ಜಖಂಗೊಂಡಿದೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಮೈಸೂರಿನಲ್ಲಿ ಹೆಲ್ಮೆಟ್ ಹಾಕಿದ್ದರೂ ಪೊಲೀಸರು ಅಡ್ಡಹಾಕುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಬೈಕ್ ಚಾಲನೆ ವೇಳೆ ದೇವರಾಜ್ ಹೆಲ್ಮೆಟ್ ಧರಿಸಿದ್ದರೂ ಹಳೆಯ ಕೇಸ್ ದಂಡ ವಸೂಲಿಗಾಗಿ ಸಂಚಾರ ಪೊಲೀಸರು ಅಡ್ಡಗಟ್ಟಿದ್ದಾರೆ. ಆಗ ತಪ್ಪಿಸಿಕೊಳ್ಳಲೆತ್ನಿಸಿದ ದೇವರಾಜ್ಗೆ ಪೇದೆಯೊಬ್ಬರು ಲಾಠಿ ಬೀಸಿದ್ದಾರೆ.