


ಕಾಪು: ಉಳಿಯಾರಗೋಳಿ ಗ್ರಾಮದ ಕೋತಲಕಟ್ಟೆ ಕಾಂಗ್ರೆಸ್ ಮುಖಂಡ ಕಾಪು ದಿವಾಕರ ಶೆಟ್ಟಿ ಅವರ ಮನೆಗೆ ಜ.29ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಸಹಿತ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿವಾಕರ ಶೆಟ್ಟಿ ಕುಟುಂಬ ಸಮೇತರಾಗಿ ಶುಭ ಕಾರ್ಯಕ್ಕಾಗಿ ಮುಂಬಯಿಗೆ ತೆರಳಿದ್ದು, ಮಧ್ಯರಾತ್ರಿಯ ವೇಳೆ ಮನೆಯ ಮುಖ್ಯ ದ್ವಾರದ ದಾರಂದ ಮುರಿದು ಒಳ ನುಗ್ಗಿದ ಕಳ್ಳರು, ಮನೆಯನ್ನು ಜಾಲಾಡಿದ್ದಾರೆ. ಮನೆಯ ಸಿಸಿ ಕ್ಯಾಮೆರಾದ ದಿಕ್ಕನ್ನು ಬದಲಿಸಿ, ಕೃತ್ಯ ಎಸಗಿರುವ ಕಳ್ಳರು ಡಿವಿಆರ್ ಅನ್ನು ಕೊಂಡೊಯ್ದಿದ್ದಾರೆ.
ಕಪಾಟಿನಲ್ಲಿದ್ದ ಸುಮಾರು 30ಗ್ರಾಂ ಚಿನ್ನಾಭರಣ, ಸುಮಾರು 9 ಲಕ್ಷ ರೂ ನಗದು, ಬೆಳ್ಳಿಯ ತಂಬಿಗೆಗಳು, 3 ಲಕ್ಷ ರೂ. ಮೌಲ್ಯದ 3 ವಾಚ್ ಗಳು, ಸುಮಾರು 300 ಗ್ರಾಂ ತೂಕದ ಬೆಳ್ಳಿಯ ಹರಿವಾಣಗಳು ಸಹಿತ 19.05 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳ್ಳರು ಕಳವು ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಮನೆಯ ಮೇಲಿನ ಮಹಡಿಯಲ್ಲಿ ದಿವಾಕರ ಶೆಟ್ಟಿ ಅವರ ನಿಕಟ ವ್ಯಕ್ತಿ ಮಲಗಿದ್ದು, ಅವರಿಗೆ ಈ ಯಾವುದೇ ಕೃತ್ಯ ಗಮನಕ್ಕೆ ಬಂದಿರಲಿಲ್ಲ. ಆ ವ್ಯಕ್ತಿ ಮಲಗಿದ್ದ ಕೋಣೆಗೂ ಕಳ್ಳರು ಬಂದು ಜಾಲಾಡಿದ್ದರೆನ್ನಲಾಗಿದೆ. ಅಲ್ಲದೆ ಅವರ ಮೊಬೈಲ್ನ್ನು ಕಳ್ಳರು ಕೊಂಡೊಯ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಎಸೆದಿರುವುದು ಕಂಡುಬಂದಿದೆ.
ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದು, ಉಡುಪಿ ಡಿವೈಎಸ್ಪಿ ಡಿ.ಟಿ. ಪ್ರಭು, ವೃತ್ತ ನಿರೀಕ್ಷಕ ಅಜ್ಜತ್ ಅಲಿ, ಎಸೈ ತೇಜಸ್ವಿ, ಬೆರಳಚ್ಚು ವಿಭಾಗದ ನಿರೀಕ್ಷಕಿ ಮೋಹಿನಿ ಸಹಿತ ಕಾಪು ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ.








