ವಿಟ್ಲ: ಕರೋಪ್ಪಾಡಿ ಗ್ರಾಮದ ಹನುಮಂತ ಎಸ್ ಸುಡುಗಾಡಸಿದ್ದ ರವರ ಮಗ ಗಣೇಶ (15) ಎಂಬಾತನು ಕಾಣೆಯಾಗಿರುತ್ತಾನೆ.
ಹನುಮಂತ ಎಸ್ ಸುಡುಗಾಡಸಿದ್ದ ರವರು ಕಳೆದ 8 ವರ್ಷಗಳಿಂದ ಕರೋಪ್ಪಾಡಿ ಗ್ರಾಮದ ಒಡಿಯೂರು ದೇವಸ್ಥಾನದಲ್ಲಿ ತನ್ನ ಹೆಂಡತಿ ಮತ್ತು ಮೂವರು ಮಕ್ಕಳೊಂದಿಗೆ ವಾಸವಾಗಿದ್ದು, ಮೊದಲನೇ ಮಗ ಗಣೇಶ (15) ಒಡಿಯೂರು ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡಿಕೊಂಡಿದ್ದ.
ಕೊರೊನಾ ಕಾರಣದಿಂದಾಗಿ ಶಾಲೆಗೆ ರಜೆ ಇದ್ದುದರಿಂದ ಮನೆಯಲ್ಲಿದ್ದ ಗಣೇಶ ಆನ್ ಲೈನ್ ಕ್ಲಾಸಿಗಾಗಿ ತನ್ನ ತಂದೆಯ ಬಳಿ ಇದ್ದ ಮೊಬೈಲ್ ಫೋನ್ ಪಡೆದು ಪಬ್ ಜೀ ಗೇಮ್ ಆಡುತ್ತಿದ್ದ ಅದನ್ನು ಗಮನಿಸಿದ ತಂದೆ ಗೇಮ್ ಆಡಬೇಡ ಓದಿಕೋ ಎಂದು ಹಲವಾರು ಬಾರಿ ಬುದ್ಧಿವಾದ ಹೇಳಿದರು ಲೆಕ್ಕಿಸದೆ ಇದ್ದ ಮಗನನ್ನು ಒಡಿಯೂರು ಶಾಲೆಗೆ ಕರೆದುಕೊಂಡು ಹೋಗಿ ಈ ವಿಚಾರವನ್ನು ಶಿಕ್ಷಕರಿಗೆ ತಿಳಿಸಿದಾಗ ಶಿಕ್ಷಕರು ಗಣೇಶನಿಗೆ ಬುದ್ದಿವಾದ ಹೇಳಿ ಸೋಮವಾರದಂದು ಶಾಲೆಗೆ ಬರುವಂತೆ ಹೇಳಿ ಕಳುಹಿಸಿದ್ದರು.
ಹನುಮಂತರವರು ಕೆಲಸಕ್ಕೆ ಹೋಗಿ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಾಗ ಮಗ ಗಣೇಶ ಮನೆಯಲ್ಲಿ ಇರಲಿಲ್ಲ, ಮಕ್ಕಳಲ್ಲಿ ವಿಚಾರಿಸಿದಾಗ ಶಾಲೆಯಿಂದ ಬಂದ ಬಳಿಕ ಮನೆಯಿಂದ ಹೊರಗೆ ಹೋದವನು ಇಲ್ಲಿಯವರೆಗೆ ಬರಲಿಲ್ಲವೆಂದು ತಿಳಿಸಿದರು.
ಹನುಮಂತರವರು ಕರೋಪ್ಪಾಡಿ, ವಿಟ್ಲ , ಮತ್ತಿತರ ಸ್ಥಳಗಳಲ್ಲಿ ಹುಡುಕಾಡಿ ಸಂಬಂಧಿಕರ ಬಳಿ ದೂರವಾಣಿ ಮುಖಾಂತರ ವಿಚಾರಿಸಿ ಸಿಗದೇ ಇದ್ದಾಗ ಅಪ್ರಾಪ್ತ ವಯಸ್ಸಿನ ಮಗನನ್ನು ಯಾರಾದರೂ ಅಪಹರಿಸಿರಬಹುದೇ ಅಥವಾ ಕಾಣೆಯಾಗಿರಬಹುದೇ ಎಂಬ ಸಂಶಯದಿಂದ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.