ವಿಟ್ಲ: ಇತಿಹಾಸ ಪ್ರಸಿದ್ದ ಪಾಂಡವರ ಕೋಟೆ, ಕೋಟೆತ್ತಡ್ಕ ಮುಳಿಯ ಇಲ್ಲಿ ನಡೆಯುತ್ತಿರುವ ಅಕ್ರಮ ಹಾಗು ಸಕ್ರಮ ಕೆಂಪು ಕಲ್ಲು ಗಣಿಗಾರಿಕೆಯನ್ನು ಸ್ಥಳೀಯರ ಹಾಗು ಸಾರ್ವಜನಿಕರ ತೀವ್ರ ವಿರೋಧ ಹಾಗು ಭಾರೀ ಪ್ರಕೃತಿ ವಿಕೋಪವನ್ನು ತಡೆಯುವ ಉದ್ದೇಶದಿಂದ ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು ರವರು ಸಂಬಂಧ ಪಟ್ಟ ಇಲಾಖೆಗೆ ಗಣಿಗಾರಿಕೆಯನ್ನು ನಿಲ್ಲಿಸಲು ಸೂಚಿಸಿರುತ್ತಾರೆ.

ಬಂಟ್ವಾಳ ತಾಲೂಕು ವಿಟ್ಲ ಅಳಿಕೆ ಗ್ರಾಮದ ಮುಳಿಯ – ಕೋಟೆತ್ತಡ್ಕ ಪ್ರದೇಶವು ಅತೀ ಎತ್ತರದ ಪ್ರದೇಶವಾಗಿದ್ದು, ಇಲ್ಲಿ ಕಳೆದ ಕೆಲವು ವರ್ಷಗಳಿಂದ ಅಕ್ರಮ ಹಾಗು ಸಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಸ್ಥಳೀಯರಿಗೆ ತೊಂದರೆ ಹಾಗೂ ಭಯದ ವಾತಾವರಣವನ್ನು ಉಂಟು ಮಾಡಿತ್ತು.


ಈ ಪ್ರದೇಶವು ಅತೀ ಎತ್ತರವಾಗಿದ್ದು ಕೊಡಗಿನಲ್ಲಿ ನಡೆದ ಘಟನೆ ಇಲ್ಲಿ ಮರುಕಳಿಸಬಾರದೆಂದು ಸ್ಥಳೀಯರು ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದರು. ಆ ಸಮಯದಲ್ಲಿ ಎಚ್ಚೆತ್ತ ಇಲಾಖೆ ತಾತ್ಕಾಲಿಕವಾಗಿ ಗಣಿಗಾರಿಕೆಯನ್ನು ನಿಲ್ಲಿಸಿತ್ತು.

ಇದೀಗ ಸುಮಾರು ಎರಡು ತಿಂಗಳಿನಿಂದ ಪ್ರಭಾವಿಗಳ ಒತ್ತಡದಿಂದ ಮತ್ತೆ ಗಣಿಗಾರಿಕೆಯನ್ನು ಆರಂಭಿಸಿದ್ದರು. ಹಲವಾರು ಬಾರಿ ಸ್ಥಳೀಯರು ಸಂಬಂಧ ಪಟ್ಟ ಇಲಾಖೆಗೆ ದೂರು ನೀಡಿದರೂ ಗಣಿಗಾರಿಕೆ ನಿರಂತರ ನಡೆಯಿತ್ತಿತ್ತು.

ಈ ಬಗ್ಗೆ ಸ್ಥಳೀಯರು ಮತ್ತು ಪಾಂಡವರ ಕೋಟೆ ಹಿತ ರಕ್ಷಣಾ ವೇದಿಕೆ, ಪುತ್ತೂರು ಶಾಸಕರನ್ನು ಭೇಟಿ ಮಾಡಿ ಇಲ್ಲಿಯ ಪಾಂಡವರ ಕೋಟೆಯ ಇತಿಹಾಸದ ಬಗ್ಗೆ ಮಾಹಿತಿ ನೀಡಿ ಗಣಿಗಾರಿಕೆಯಿಂದ ಸ್ಥಳೀಯರಿಗೆ ಆಗುವ ತೊಂದರೆಗಳನ್ನು ಮನದಟ್ಟು ಮಾಡಿದಾಗ ತಕ್ಷಣ ಸ್ಪಂಧಿಸಿದ ಶಾಸಕರು ಸಂಬಂಧ ಪಟ್ಟ ಇಲಾಖೆಗೆ ಗಣಿಗಾರಿಕೆಯನ್ನು ನಿಲ್ಲಿಸಲು ಸೂಚಿಸಿದ್ದಾರೆ.

ಸ್ಥಳೀಯರ ತೊಂದರೆಗೆ ಸ್ಪಂಧಿಸಿದ ಶಾಸಕರ ಈ ಕಾರ್ಯವನ್ನು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.










