ವಿಟ್ಲ: ಹಲವು ಸಮಯಗಳ ಹಿಂದೆ ವಿಟ್ಲ ಠಾಣಾ ವ್ಯಾಪ್ತಿಯ ಕುದ್ದುಪದವು ಜಗನ್ನಾಥ ಶೆಟ್ಟಿರವರ ಪಾಲುದಾರಿಕೆಯ ಎಸ್ ಆರ್ ಪಂಪ್ನಲ್ಲಿ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಪೊಲೀಸರ ಬಂಧನದಲ್ಲಿದ್ದ ಆರೋಪಿ ಕಾಸರಗೋಡು ಕುಂಬ್ಳೆ ಬಂಬ್ರಾಣ ನಿವಾಸಿ ಫೈಜಲ್ ಅಲಿಯಾಸ್ ಪಗ್ಗು ಎಂಬಾತನನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಇವನನ್ನು ಬಂಧಿಸಿದ್ದು ಈ ವೇಳೆ ಈತನ ಇನ್ನಷ್ಟು ಕೃತ್ಯಗಳು ಬೆಳಕಿಗೆ ಬಂದಿದೆ.
ಎಸ್ಆರ್ ಪಂಪ್ನಲ್ಲಿ ನಗದು ಕಳವು ಪ್ರಕರಣ
ಹಲವು ಸಮಯಗಳ ಹಿಂದೆ ವಿಟ್ಲದ ಮುರಳಿ ಎಂಬವರ ಗೂಡ್ಸ್ ಟೆಂಪೋವನ್ನು ಎಗರಿಸಿ ನಂತರ ಕುದ್ದುಪದವು ಎಸ್ಆರ್ ಪೆಟ್ರೋಲ್ ಪಂಪ್ನಲ್ಲಿ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಟ್ಟಂಪಾಡಿಯಲ್ಲಿ ಸಾರ್ವಜನಿಕರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಳ್ಳರು
ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ನಿಡ್ನಳ್ಳಿ ಗ್ರಾಮ ಮಹಿಳೆಯೋರ್ವರ ಕರಿಮಣಿ ಸರವನ್ನು ಇಬ್ಬರು ಖದೀಮರು ಎಗರಿಸಿ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದರು. ಆ ಬಳಿಕ ಪೊಲೀಸರಿಗೆ ಒಪ್ಪಿಸಿದ್ದರು. ಈ ವೇಳೆ ಆರೋಪಿಗಳ ಬಣ್ಣ ಬಯಲಾಗಿದೆ. ಈ ವೇಳೆ ಬಂಧಿಸಿದ ಆರೋಪಿಗಳನ್ನು ಕುಂಬ್ಳೆ ಬಂಬ್ರಾಣ ನಿವಾಸಿ ಫೈಜಲ್ @ ಪಗ್ಗು ಮತ್ತು ಸೀತಾಂಗೋಳಿ ನಿವಾಸಿ ಅಬ್ದುಲ್ ನಿಝಾರ್ ಎನ್ನಲಾಗಿದೆ. ಬಂಧಿತರಿಂದ ರೂ 50,000/-ಮೌಲ್ಯದ ತುಂಡಾದ ಚಿನ್ನದ ಕರಿಮಣಿ ಸರ ಹಾಗೂ ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಎಫ್ ಝಡ್ ಬೈಕ್ ಮತ್ತು ಪ್ರಕರಣಕ್ಕೆ ಉಪಯೋಗಿಸಿದ ಕಂಪು ಬಣ್ಣದ ರಾಯಲ್ ಎನ್ ಫೀಲ್ಡ್ ಬೈಕ್ ನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಮಾಡಿದಾಗ ಈ ಹಿಂದೆ ವಿಟ್ಲ ಠಾಣಾ ವ್ಯಾಪ್ತಿಯ ಕುದ್ದುಪದವು ಜಗನ್ನಾಥ ಶೆಟ್ಟಿರವರ ಮಾಲಕತ್ವದ ಪೆಟ್ರೋಲ್ ಪಂಪ್ ಕಳ್ಳತನ ಪ್ರಕರಣ ಹಾಗೂ ವಿಟ್ಲ ಠಾಣಾ ವ್ಯಾಪ್ತಿಯ ಕಾಶಿಮಠ ಎಂಬಲ್ಲಿ ಗೂಡ್ಸ್ ಟೆಂಪೋ ಕಳ್ಳತನ ಪ್ರಕರಣ ಮತ್ತು ಪುತ್ತೂರು ನಗರ ಠಾಣಾ ವ್ಯಾಪ್ತಿಯ ಬೈಪಾಸ್ ರಸ್ತೆಯಲ್ಲಿ ಮಹಿಳೆಯ ಸರ ಕಳ್ಳತನ ನಡೆಸಿರುವುದಾಗಿ ಒಪ್ಪಿಕೊಂಡಿರುತ್ತಾರೆ.