ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಸಂಕಷ್ಟ ಎದುರಾಗಿದೆ. ಪನಾಮಾ ಪೇಪರ್ಸ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಸಮನ್ಸ್ (ED Summons) ನೀಡಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಐಶ್ವರ್ಯಾ ರೈ ಅವರಿಗೆ ಸಮನ್ಸ್ ನೀಡಿದೆ.
2016ರಿಂದಲೂ ಪನಾಮಾ ಪೇಪರ್ಸ್ ಲೀಕ್ ಪ್ರಕರಣ ಸದ್ದು ಮಾಡುತ್ತಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರು ಈ ಮೊದಲೇ ಜಾರಿ ನಿರ್ದೇಶನಾಲಯಕ್ಕೆ ಕೆಲವು ದಾಖಲೆ ಪತ್ರಗಳನ್ನು ಒಪ್ಪಿಸಿದ್ದರು. ಈಗ ಮತ್ತೆ ಸಮನ್ಸ್ ನೀಡಿರುವುದು ಅಚ್ಚರಿ ಮೂಡಿಸಿದೆ.
ದೆಹಲಿಯಲ್ಲಿ ಇರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಡಿ.20ರಂದು ಹಾಜರಾಗುವಂತೆ ಐಶ್ವರ್ಯಾ ರೈ ಅವರಿಗೆ ಸಮನ್ಸ್ ನೀಡಲಾಗಿದೆ. ಮುಂಬೈನಲ್ಲಿರುವ ಅವರ ‘ಪ್ರತೀಕ್ಷಾ’ ನಿವಾಸಕ್ಕೆ ಸಮನ್ಸ್ ತಲುಪಿದೆ. 15 ದಿನಗಳ ಒಳಗೆ ಪ್ರತಿಕ್ರಿಯಿಸುವಂತೆ ಅದರಲ್ಲಿ ತಿಳಿಸಲಾಗಿದೆ ಎಂದು ವರದಿ ಆಗಿದೆ.
ಮೂಲಗಳ ಪ್ರಕಾರ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಜಾರಿ ನಿರ್ದೇಶನಾಲಯವು ದಾಖಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ಇಂದು ತಮ್ಮ ಹೇಳಿಕೆಯನ್ನು ದಾಖಲಿಸುವಂತೆ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಸೂಚಿಸಲಾಗಿದೆ. ಆದರೆ ವಿಚಾರಣೆಗೆ ಹಾಜರಾಗಲು ಬೇರೆ ದಿನಾಂಕವನ್ನು ಅವರು ಕೇಳಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕೂಡ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ಎರಡು ಬಾರಿ ಅವರು ವಿಚಾರಣೆ ದಿನಾಂಕ ಮುಂದೂಡಲು ಕೇಳಿಕೊಂಡಿದ್ದರು.