ಮೂಡಬಿದಿರೆ: ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಇಂದು ವಿದ್ಯಾರ್ಥಿಗಳು ಪಡುವ ಶ್ರಮ ಅವರ ಮುಂದಿನ ಉಜ್ವಲ ಬದುಕಿಗೆ ಸಹಕಾರಿಯಾಗಬಲ್ಲದು, ಆ ನಿಟ್ಟಿನಲ್ಲಿ ಕಾಲೇಜಿನಲ್ಲಿ ಪ್ರಾರಂಭಗೊಂಡ ಸಿ.ಎ. ಫೌಂಡೇಶನ್ ಕೋರ್ಸಿನ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕೆಂದು ಶ್ರೀ ಮಹಾವೀರ ಕಾಲೇಜಿನ ಹಳೆವಿದ್ಯಾರ್ಥಿ ಸಿಎ ಆದರ್ಶ ಶೆಣೈ ಅಭಿಪ್ರಾಯಪಟ್ಟರು.
ಅವರು ಕಾಲೇಜಿನಲ್ಲಿ ಆರಂಭಗೊಂಡ ಸಿ. ಎ. ಫೌಂಡೇಶನ್ ಕೋರ್ಸನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಧಾಕೃಷ್ಣ ಶೆಟ್ಟಿ ಮಾತಾಡಿ ಸಿ.ಎ. ಫೌಂಡೇಶನ್ ಕೋರ್ಸ್ ವಿದ್ಯಾರ್ಥಿಗಳಿಗೆ ಸಿ.ಎ. ಪದವಿ ಪಡೆಯಲು ಪೂರಕವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀಮಹಾವೀರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಮೇಶ್ ಭಟ್ ಹಾಗೂ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಹರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿ.ಎ. ಫೌಂಡೇಶನ್ ಕೋರ್ಸ್ ನ ಸಂಯೋಜಕಿ ಶ್ರುತಿ ಎಸ್. ಡಾಂಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿನಿಯರಾದ ಅಕ್ಷತಾ, ಶ್ರೇಯ, ಭಾಗ್ಯಲಕ್ಷ್ಮಿ ಪ್ರಾರ್ಥನೆಯನ್ನು ಹಾಡಿದರು. ಕೃತಿಕ ನಾಯಕ್ ಸ್ವಾಗತಿಸಿ, ಶ್ರುತಿ ಎಸ್. ಪೇರಿ ವಂದನಾರ್ಪಣೆಗೈದರು. ಮೋನಿಶ ಅತಿಥಿ ಪರಿಚಯ ನಡೆಸಿಕೊಟ್ಟರು. ರಿಯೋನ ಪಿಂಟೊ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಪದ್ಮಶ್ರೀ, ಬಸನಗೌಡ ಪಾಟೀಲ್, ಚಿತ್ರಲೇಖಾ ಹಾಗೂ ಶಿವಪ್ರಸಾದ್ ಉಪಸ್ಥಿತರಿದ್ದರು.