

ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರಿಗೆ ಸಂಕಷ್ಟ ಎದುರಾಗಿದೆ. ಅವರೀಗ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಸಾಲದ ಹಣ ವಾಪಸ್ ನೀಡುವಂತೆ ದ್ವಾರಕೀಶ್ಗೆ ಕೋರ್ಟ್ ಆದೇಶಿಸಿದೆ. 1 ತಿಂಗಳಲ್ಲಿ ಸಾಲದ ಹಣ ಹಿಂದಿರುಗಿಸಲು ಗಡುವು ನೀಡಲಾಗಿದೆ.
2013ರಲ್ಲಿ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ಅವರಿಂದ ದ್ವಾರಕೀಶ್ ಸಾಲ ಪಡೆದುಕೊಂಡಿದ್ದರು. ‘ಚಾರುಲತಾ’ ಸಿನಿಮಾ ಬಿಡುಗಡೆಗಾಗಿ 50 ಲಕ್ಷ ರೂ. ಮೊತ್ತವನ್ನು ಅವರು ಪಡೆದಿದ್ದರು. ನಂತರ ಸಾಲದ ಹಣ ವಾಪಸ್ ನೀಡದೇ ಸತಾಯಿಸಿದ್ದರು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇನ್ನು ಒಂದು ತಿಂಗಳ ಒಳಗೆ 52 ಲಕ್ಷ ರೂ.ಗಳನ್ನು ಹಿಂದಿರುಗಿಸುವಂತೆ ದ್ವಾರಕೀಶ್ ಅವರಿಗೆ ಕೋರ್ಟ್ ಆದೇಶ ನೀಡಿದೆ.

2013ರಲ್ಲಿ ಕೆಸಿಎನ್ ಚಂದ್ರಶೇಖರ್ ಅವರಿಂದ ಸಾಲ ಪಡೆಯುವಾಗ ದ್ವಾರಕೀಶ್ ಅವರು ಚೆಕ್ ನೀಡಿದ್ದರು. ನಂತರ ‘ನಾನು ಚೆಕ್ ನೀಡಿಲ್ಲ, ಚೆಕ್ಗೆ ಸಹಿ ಮಾಡಿಲ್ಲ’ ಎಂದು ಅವರು ವಾದಿಸಿದ್ದರು. ಹೀಗಾಗಿ ಕೋರ್ಟ್ ಮೊರೆ ಹೋಗುವುದು ಕೆಸಿಎನ್ ಚಂದ್ರಶೇಖರ್ ಅವರಿಗೆ ಅನಿವಾರ್ಯ ಆಗಿತ್ತು. ಆ ಸಹಿ ದ್ವಾರಕೀಶ್ ಅವರದ್ದೇ ಎಂದು ಫೋರೆನ್ಸಿಕ್ ಲ್ಯಾಬ್ನಲ್ಲಿ ಸಾಬೀತಾಗಿತ್ತು.

ಹಣ ಹಿಂದಿರುಗಿಸುವಂತೆ 2019ರಲ್ಲಿ ದ್ವಾರಕೀಶ್ ಅವರಿಗೆ ನ್ಯಾಯಾಲಯ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಅವರು ಸೆಷನ್ಸ್ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ಬಳಿಕ ಕೆಳ ನ್ಯಾಯಾಲಯದ ಆದೇಶವನ್ನು ಸೆಷನ್ಸ್ ಕೋರ್ಟ್ ಎತ್ತಿ ಹಿಡಿದಿದೆ.











