ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ(NIA) ವಿಚಾರಣೆ ಎದುರಿಸಿ ಹೊರ ಬಂದ ಪಿಎಫ್ಐ ಕಾರ್ಯಕರ್ತನಿಗೆ ಹಾರ, ತುರಾಯಿ ಹಾಕಿ ಅದ್ಧೂರಿ ಸ್ವಾಗತ ಕೋರಿದ ದೃಶ್ಯ ಮೈಸೂರಿನಲ್ಲಿ ಕಂಡುಬಂದಿದೆ.
ಹತ್ಯೆ ಪ್ರಕರಣದಲ್ಲಿ ಮೈಸೂರಿನ ಪಿಎಫ್ಐ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಸುಲೇಮಾನ್ನನ್ನು ಪೊಲೀಸರು ವಶಕ್ಕೆ ಪಡೆದು ಮೈಸೂರಿನ ಗೌಪ್ಯ ಸ್ಥಳದಲ್ಲಿ ಎನ್ಐಎ ತಂಡ ವಿಚಾರಣೆ ನಡೆಸಿದ್ದರು.
ಸುಲೇಮಾನ್ ವಶಕ್ಕೆ ಪಡೆಯುತ್ತಿದ್ದಂತೆ ಮನೆ ಬಳಿ ಪಿಎಫ್ಐ ಸಂಘಟನೆ ಸದಸ್ಯರು ಜಮಾಯಿಸಿದ್ದರು.ವಿಚಾರಣೆ ಮುಗಿಸಿ ಹೊರ ಬರುತ್ತಿದ್ದಂತೆ ಹಾರ ಹಾಕಿ ಸ್ವಾಗತ ಕೋರಿ, ಸುಲೇಮಾನ್ ಪರ ಘೋಷಣೆಯನ್ನೂ ಕೂಗಿದ್ದಾರೆ. ಮೈಸೂರಿನ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ
ಈಚೆಗಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಪೇಟೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಈ ಸಂಬಂಧಿತ ತನಿಖೆಯನ್ನು ಎನ್ಐಎ ಹೆಗಲಿಗೆ ಹೊರಿಸಲಾಗಿದೆ. ತನಿಖೆ ಚುರುಕುಗೊಳಿಸಿದ್ದ ಎನ್ಐಎ ತಂಡ ಕೊಲೆ ಆರೋಪದ ಮೇಲೆ ಮೈಸೂರಿನ ಪಿಎಫ್ಐ ಸಂಘಟನೆ ಕಾರ್ಯಕರ್ತನನ್ನು ವಶಕ್ಕೆ ಪಡೆದಿತ್ತು.