“ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು ಹರುಷಕ್ಕಿದೆ ದಾರಿ ” ಇದು ಡಿ. ವಿ. ಜಿ ಯವರು ಹೇಳಿದ ಸ್ವ ಸಂತೋಷ ಪಡೆಯುವ ದಾರಿ. ಸಮಾಜ ಸೇವೆ ಎಂಬ ಆತ್ಮತೃಪ್ತಿ ಪಡೆಯುವ ದಾರಿಯಲ್ಲಿ ಇಲ್ಲವೆಂಬುದು ಹಾದಿ ತಪ್ಪಿಸುವಾಗ ನಮಗೆ ಬಲ ಕೊಡುವುದು ಇದೇ ಕಗ್ಗದ ಮಾತು. ಹೀಗೆಂದು ಹಿಗ್ಗಿ ,ಸೇವೆಯ ಕೈಂಕರ್ಯ ಮೆರೆದ ಕೀರ್ತಿ ಎರುಂಬು ಶ್ರೀ ದಿವ್ಯಜ್ಯೋತಿ ಮಿತ್ರವೃಂದದ್ದು.
ಸಮರ್ಥ ನಾಯಕರ ಹಿರಿತನ, ದುಶ್ಚಟಮುಕ್ತ ಯುವ ಮನಸ್ಸು, ಸಾಮಾಜಿಕ ಕಳಕಳಿ ಇದರ ಯಶಸ್ಸಿನ ಹಾದಿ. ಸುಮಾರು 30 ವರ್ಷಗಳ ಪ್ರಬುದ್ಧ ಸಾಮಾಜಿಕ ಸೇವೆ ಈ ಯುವಕರದ್ದು. ದಿವಂಗತ ರಾಮಯ್ಯ ಬಳ್ಳಾಲರೆಂಬ ಶ್ರಮ ಜೀವಿ, ರಾಜಕೀಯ ನೇತಾರ ಈ ಮಿತ್ರವೃಂದದ ಸ್ಥಾಪಕ ಅಧ್ಯಕ್ಷರು. ಅವರ ಸ್ಮರಣಾರ್ಥವಾಗಿ ಯುವ ಮುಂದಾಳು, ಉತ್ತಮ ಸಂಘಟಕ ಮೋಹನದಾಸ್ ರೈ ಯವರ ನೇತೃತ್ವದಲ್ಲಿ, ದಿ. ಬಲ್ಲಾಳರ ಪುತ್ರರು ಹಾಗೂ ದಿವ್ಯಜ್ಯೋತಿ ಮಿತ್ರವೃಂದದ ಸಹಭಾಗಿತ್ವದಲ್ಲಿ ದಿನಾಂಕ 01.05.2022ರಂದು ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಯವರ ಸಾರಥ್ಯದಲ್ಲಿ, ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಮೇಳದವರಿಂದ “ಶ್ರೀ ದೇವಿ ಮಹಾತ್ಮೆ”ಎಂಬ ಪೌರಾಣಿಕ ಯಕ್ಷಗಾನ ಕಾರ್ಯಕ್ರಮವು ಅಳಿಕೆ ಶ್ರೀ ಸತ್ಯಸಾಯಿ ವಿಹಾರದಲ್ಲಿ ಆಯೋಜಿಸಲಾಗಿದೆ.
ಸಂಜೆ ಗಂಟೆ 6.00 ಗಂಟೆಗೆ ಚೌಕಿ ಪೂಜೆಯೊಂದಿಗೆ ಆರಂಭವಾಗಲಿರುವ ಈ ಕಾರ್ಯಕ್ರಮವು, ರಾತ್ರಿ 8.00ಗಂಟೆಗೆ ಅನ್ನಸಂತರ್ಪಣೆ, 9.30ಗೆ ಸಾಧಕರ ಸನ್ಮಾನ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಈ ಯಕ್ಷಗಾನ ಕಾರ್ಯಕ್ರಮವು ರಾತ್ರಿ 12.30ಕ್ಕೆ ಮುಕ್ತಯವಾಗಲಿದ್ದು ಕಾಲಮಿತಿಯದ್ದಾಗಿದೆ. ದಿ. ರಾಮಯ್ಯ ಬಲ್ಲಾಳರ ಅಭಿಮಾನಿಗಳು, ಯಕ್ಷ ಕಲಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಂಘಟಕರು ತಿಳಿಸಿದ್ದಾರೆ.