


ಉಡುಪಿ: ಜಗತ್ತಿನಲ್ಲಿ ಯುದ್ಧ ಕೊನೆಗೊಂಡು ಶಾಂತಿ ನೆಲಸಲಿ ಎಂದು ಆಗ್ರಹಿಸಿ ಕುಂದಾಪುರದ ಅಂತಾರಾಷ್ಟ್ರೀಯ ದುಡಿಯುವ ಮಕ್ಕಳ ಸಂಸ್ಥೆಯಾದ ‘ನಮ್ಮ ಭೂಮಿ’ಯ ಪ್ರತಿನಿಧಿ, ಮಕ್ಕಳ ಹಕ್ಕುಗಳ ಹೋರಾಟಗಾರ, ರಂಗಭೂಮಿ ಕಲಾವಿದ ಹಾಗೂ ಕನ್ನಡ ಉಪನ್ಯಾಸಕ ರಾಮಾಂಜಿ ಶನಿವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಮುಂದಿನ ಗಾಂಧಿ ಪ್ರತಿಮೆ ಎದುರು ಧರಣಿ ಆರಂಭಿಸಿದ್ದಾರೆ.’ಯುದ್ಧ ತೊಲಗಲಿ, ಶಾಂತಿ ನೆಲೆಸಲಿ’, ‘ಯುದ್ಧ ನಿಲ್ಲಿಸಿ ಪರಿಸರ ಉಳಿಸಿ’ ಎಂಬ ಫಲಕಗಳನ್ನು ಕೈಯಲ್ಲಿ ಹಿಡಿದು, ಗಾಂಧಿ ಪುಸ್ತಕದೊಂದಿಗೆ ರಾಮಾಂಜಿ ಬೆಳಗ್ಗೆಯಿಂದ ಸಂಜೆಯವರೆಗೆ ಸಾಂಕೇತಿಕ ಧರಣಿ ನಡೆಸಲಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಯುದ್ಧ ಸಂಬಂಧಿ ಘಟನೆಗಳನ್ನು ನೋಡಿ ಮನನೊಂದು ಮಾನವ ಜನಾಂಗದ ಮೇಲೆ ನಡೆಯುತ್ತಿರುವ ಹಿಂಸೆಗಳಿಗೆ ಮತ್ತು ಪ್ರಕೃತಿಯ ಮೇಲೆ ಆಗುತ್ತಿರುವ ದಬ್ಬಾಳಿಕೆಗೆ ನೈತಿಕ ಪ್ರತಿಭಟನೆಯಾಗಿ ಗಾಂಧಿ ಮಾದರಿಯಲ್ಲಿ ಮೌನ ಧರಣಿ ನಡೆಸುತ್ತಿದ್ದೇನೆ ಎಂದು ರಾಮಾಂಜಿ ತಿಳಿಸಿದರು.’ನನ್ನ ಈ ಧರಣಿಯನ್ನು ಜನಜಾಗೃತಿಯ ಉದ್ದೇಶದಿಂದ ಮಾಡುತ್ತಿದ್ದೇನೆ. ಇದನ್ನು ಬಹಳಷ್ಟು ಮಂದಿ ಬೆಂಬಲಿಸಿದ್ದು, ಮುಂದೆ ರಾಜ್ಯ ಮಟ್ಟದವರೆಗೂ ಈ ಅಭಿಯಾನವನ್ನು ವಿಸ್ತರಿಸಲಾಗುವುದು’ ಎಂದು ರಾಮಾಂಜಿ ತಿಳಿಸಿದರು.








