



ಬೆಂಗಳೂರು: ತರಬೇತಿ ನಿರತ ಗಗನಸಖಿಯೊಬ್ಬರ ಮೇಲೆ ರಸ್ತೆಯಲ್ಲೇ ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಬಂಧಿತ ಚಂದ್ರಶೇಖರ್ ಮತ್ತು ಸಂತ್ರಸ್ತ ಯುವತಿ ಇಬ್ಬರೂ ಪರಿಚಯಸ್ಥರಾಗಿದ್ದು, ಒಂದೇ ಏರಿಯಾದಲ್ಲಿ ವಾಸವಾಗಿದ್ದರು. ಆರಂಭದಲ್ಲಿ ಇಬ್ಬರ ನಡುವೆ ಸ್ನೇಹವಿತ್ತು. ಆದರೆ ಇತ್ತೀಚೆಗೆ ಆರೋಪಿ ಚಂದ್ರಶೇಖರ್ ಯುವತಿಯನ್ನು ಪ್ರೀತಿಸುವಂತೆ ಪೀಡಿಸಲು ಆರಂಭಿಸಿದ್ದ ಎನ್ನಲಾಗಿದೆ. ಯುವಕನ ವರ್ತನೆಯಿಂದ ಬೇಸತ್ತಿದ್ದ ಯುವತಿ ಆತನನ್ನು ಸಂಪೂರ್ಣವಾಗಿ ದೂರ ಮಾಡಲು ಮುಂದಾಗಿದ್ದಳು.
ಯುವತಿ ತನ್ನನ್ನು ನಿರ್ಲಕ್ಷಿಸುತ್ತಿರುವುದಕ್ಕೆ ರೊಚ್ಚಿಗೆದ್ದ ಆರೋಪಿ, ಆಕೆ ಕಾಲೇಜಿಗೆ ಹೋಗುವಾಗ ಬೈಕ್ನಲ್ಲಿ ಸ್ನೇಹಿತರೊಂದಿಗೆ ಹಿಂಬಾಲಿಸುತ್ತಿದ್ದ. ಕಳೆದ ಒಂದು ವಾರದಲ್ಲಿ ಸುಮಾರು ಮೂರ್ನಾಲ್ಕು ಬಾರಿ ಯುವತಿಯನ್ನು ಹಿಂಬಾಲಿಸಿ ಚೇಷ್ಟೆ ಮಾಡಿದ್ದಲ್ಲದೆ ನಡುರಸ್ತೆಯಲ್ಲಿ ತಡೆದು ನಿಲ್ಲಿಸಿ ಕಿರುಕುಳ ನೀಡಿದ್ದ. ಇತ್ತೀಚೆಗೆ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಸಾರ್ವಜನಿಕವಾಗಿಯೇ ಬ್ಯಾಡ್ ಟಚ್(ಅನುಚಿತ ಸ್ಪರ್ಶ) ಮಾಡಿ ವಿಕೃತಿ ಮೆರೆದಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸತತವಾಗಿ ನಡೆಯುತ್ತಿದ್ದ ಕಿರುಕುಳದಿಂದ ಕಂಗಾಲಾದ ಯುವತಿ, ಅಂತಿಮವಾಗಿ ಪೋಷಕರೊಂದಿಗೆ ತೆರಳಿ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಚಂದ್ರಶೇಖರ್ನನ್ನು ಬಂಧಿಸಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.








