
ಬೆಂಗಳೂರು: ದುರುದ್ದೇಶದಿಂದ ರಸ್ತೆಯಲ್ಲಿ ಮೊಳೆಗಳನ್ನು ಚೆಲ್ಲಿ ವಾಹನಗಳ ಚಕ್ರಗಳನ್ನು ಪಂಚರ್ ಮಾಡುತ್ತಿದ್ದ ಆರೋಪದ ಮೇಲೆ ಪಂಚರ್ ಅಂಗಡಿಯ ಇಬ್ಬರು ಆರೋಪಿಗಳನ್ನು ಜಾಲಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಜಾಲಹಳ್ಳಿಯ ಎಂಇಎಸ್ ರಿಂಗ್ ರಸ್ತೆ ಬದಿಯಲ್ಲಿ ಪಂಚರ್ ಅಂಗಡಿ ನಡೆಸುತ್ತಿದ್ದು, ಇಬ್ಬರನ್ನು ಬಂಧಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.ಅಂಗಡಿಗೆ ವ್ಯಾಪಾರ ಹೆಚ್ಚಿಸಿಕೊಳ್ಳುವ ದುರಾಸೆಯಿಂದ, ಆರೋಪಿಗಳು ಬೈಕ್ನಲ್ಲಿ ಬಂದು ರಸ್ತೆಯುದ್ದಕ್ಕೂ ಕೆಜಿಗಟ್ಟಲೆ ಮೊಳೆಗಳನ್ನು ಚೆಲ್ಲಿ ಹೋಗುತ್ತಿದ್ದರು. ಸವಾರರು ಪಂಚರ್ ಆದ ವಾಹನಗಳನ್ನು ತಳ್ಳಿಕೊಂಡು ಬಂದಾಗ ರಸ್ತೆ ಬದಿಯಲ್ಲೇ ಪ್ರತ್ಯಕ್ಷರಾಗಿ ಪಂಚರ್ ಹಾಕಿಕೊಡುವ ಈ ನಾಟಕವಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸತತವಾಗಿ ವಾಹನಗಳು ಪಂಚರ್ ಆಗುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಜಾಗೃತರಾದ ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ವೇಳೆ ರಸ್ತೆಯಲ್ಲಿ ಅಪಾರ ಪ್ರಮಾಣದ ಮೊಳೆಗಳು ಪತ್ತೆಯಾಗಿದ್ದವು. ತಕ್ಷಣವೇ ಸ್ಥಳೀಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಳಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ.









