




ಬೆಂಗಳೂರು: ರಾಜ್ಯದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಬಳಸುವ ದುಬಾರಿ ಔಷಧಿ ಹಾಗೂ ಇಂಜೆಕ್ಷನ್ಗಳ ದರ ನಿಗದಿಗೆ ಸೂಕ್ತ ಚೌಕಟ್ಟು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಆರೋಗ್ಯ ಸಚಿವ ಯು.ಟಿ. ಖಾದರ್ ಮನವಿ ಮಾಡಿದ್ದಾರೆ.
ಕ್ಯಾನ್ಸರ್ ಔಷಧಿಗಳಿಗೆ ಬೇಕಾಬಿಟ್ಟಿ ದರಗಳನ್ನು ವಿಧಿಸಲಾಗಿದ್ದು, ದುಬಾರಿ ದರ ನಿಗದಿಪಡಿಸಿ, ಆಮೇಲೆ ರಿಯಾಯಿತಿ ದರದಲ್ಲಿ ಔಷಧ ನೀಡಲಾಗುತ್ತಿದೆ. ಅತಿಯಾದ ದರ ವಸೂಲಿ ತಡೆಯಲು ಕೇಂದ್ರ ಸರ್ಕಾರ ತಕ್ಷಣವೇ ಬೆಲೆ ನಿಗದಿ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ರಾಜ್ಯ ಸರ್ಕಾರ ಮನವಿ ಮಾಡಿದೆ.
ಔಷಧಿಗಳ ದರವನ್ನು ನಿಗದಿಪಡಿಸುವ ಅಧಿಕಾರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ, ಪ್ರಸ್ತುತ ಖಾಸಗಿ ಆಸ್ಪತ್ರೆಗಳು ಪ್ರತ್ಯೇಕ ಬೆಲೆಗಳನ್ನು ನಿಗದಿಪಡಿಸಿ ರೋಗಿಗಳನ್ನು ಸುಲಿಗೆ ಮಾಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ರೋಗಿಗಳು ತಮ್ಮ ಕೊನೆಯ ಹಂತದಲ್ಲಿದ್ದಾಗಲೂ ಆಸ್ಪತ್ರೆಗಳು ಅತ್ಯಂತ ದುಬಾರಿ ಇಂಜೆಕ್ಷನ್ಗಳನ್ನು ನೀಡಲು ಮುಂದಾಗುತ್ತವೆ. ಇಂತಹ ದುಬಾರಿ ಔಷಧಿಗಳನ್ನು ಖರೀದಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೆಲೆ ನಿಗದಿ ಮತ್ತು ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳನ್ನು ರಚಿಸುವುದು ಅತ್ಯಗತ್ಯವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿರುವುದಾಗಿ ವರದಿ ಮೂಲಕ ತಿಳಿದುಬಂದಿದೆ.








