ವಿಟ್ಲ: ಮಾಣಿ ಸಮೀಪದ ಪಲ್ಕೆ ನಿವಾಸಿ ಅಬ್ದುಲ್ ಹಮೀದ್ ಇನಾಮ್ (63) ಹೃದಯಾಘಾತದಿಂದ ಭಾನುವಾರ ರಾತ್ರಿ ನಿಧನರಾದರು.
ಸಂಜೆಯ ತನಕ ಸೌಖ್ಯದಲ್ಲಿದ್ದ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ತಕ್ಷಣ ಸ್ಥಳೀಯ ವೈದ್ಯರ ಸಲಹೆಯಂತೆ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ.
ಅವರು ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾಗಿ, ಆಡಳಿತ ಸಮಿತಿ ಸದಸ್ಯರಾಗಿ, ಮಾಣಿ ಯುವಕ ಮಂಡಲ ಸಹಿತ ಹಲವಾರು ರಾಜಕೀಯ, ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದರು.
ಜನರಿಗೆ ಸರಕಾರದ ವಿವಿಧ ಯೋಜನೆಗಳು, ವಿದ್ಯಾರ್ಥಿವೇತನ, ಆರೋಗ್ಯ ಸೇವೆಗಳನ್ನು ಒದಗಿಸುವ ಮೂಲಕ ಪರಿಸರದಲ್ಲಿ ಜನಾನುರಾಗಿಯಾಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಸಂತಾಪ
ಸಂಯುಕ್ತ ಖಾಝಿ ಶೈಖುನಾ ಮಾಣಿ ಉಸ್ತಾದ್, ಮಾಜಿ ಸಚಿವ ಬಿ.ರಮಾನಾಥ ರೈ, ದ.ಕ ಜಿಲ್ಲಾಪಂಚಾಯತ್ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಬಾಲಕೃಷ್ಣ ಆಳ್ವ, ಪ್ರಮುಖರಾದ ಜಗನ್ನಾಥ ಚೌಟ ಬದಿಗುಡ್ಡೆ, ಇಬ್ರಾಹಿಂ ಕೆ.ಮಾಣಿ, ಜಗದೀಶ್ ಜೈನ್, ದ.ಕ.ಜಿಲ್ಲಾ ಮದ್ರಸ ಮೆನೇಜ್ ಮೆಂಟ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಹಾಜಿ ನೇರಳಕಟ್ಟೆ, ಸೂರಿಕುಮೇರ್ ಜುಮಾ ಮಸೀದಿ ಅಧ್ಯಕ್ಷ ಮೂಸಾ ಕರೀಂ ಮಾಣಿ, ಪರ್ಲೊಟ್ಟು ಅಬೂಬಕ್ಕರ್ ಸಿದ್ದೀಕ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್ ದರ್ಬಾರ್, ಗಡಿಯಾರ ಜುಮಾ ಮಸೀದಿ ಅಧ್ಯಕ್ಷ ರಿಯಾಝ್ ಕಲ್ಲಾಜೆ, ಪಾರ್ಪಕಜೆ ಮಸೀದಿ ಅಧ್ಯಕ್ಷ ಅಝೀಝ್ ಬೊಳ್ಳುಕಲ್ಲು ಮೊದಲಾದವರು ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ.