ಶ್ರೀನಗರ,ಮಾ.16: ಜೈಷ್-ಇ-ಮಹಮ್ಮದ್ ಸಂಘಟನೆಯ ಕಮಾಂಡರ್ ಹತ್ಯೆಯೊಂದಿಗೆ ನಿನ್ನೆಯಿಂದ ಷೋಪಿಯನ್ನಲ್ಲಿ ನಡೆಯುತ್ತಿದ್ದ ಸೇನೆ ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿ ಅಂತ್ಯಗೊಂಡಿದೆ. ಷೋಪಿಯನ್ ಜಿಲ್ಲೆಯ ರಾವಲ್ಪುರ ಗ್ರಾಮದಲ್ಲಿ ಉಗ್ರರು ಅಡಗಿರುವ ಶಂಕೆ ಹಿನ್ನಲೆಯಲ್ಲಿ ಸೇನೆ ನಿನ್ನೆಯಿಂದ ಶೋಧ ಕಾರ್ಯಾಚರಣೆ ನಡೆಸುತ್ತಿತ್ತು.
ರಾವಲ್ಪುರ್ ನ ಗ್ರಾಮಸ್ಥರು ಸೇನೆ ಮೇಲೆ ಕಲ್ಲು ತೂರಾಟ ನಡೆಸಿ ಉಗ್ರರು ಪರಾರಿಯಾಗಲು ಸಹಕರಿಸಿದ್ದರಿಂದ ಕಾರ್ಯಾಚರಣೆಗೆ ಸ್ವಲ್ಪ ಹಿನ್ನಡೆಯಾಗಿದೆ. ಕಲ್ಲು ತೂರಾಟ ನಡೆಸುವವರನ್ನು ಚದುರಿಸುವ ಸಂದರ್ಭದಲ್ಲಿ ಕೆಲವು ಸ್ಥಳೀಯ ಯುವಕರಿಗೆ ಗಾಯಗಳಾಗಿವೆ. ಕೆಲ ಮನೆಗಳು ಗುಂಡಿನ ದಾಳಿಯಿಂದ ಹಾನಿಗೀಡಾಗಿದೆ.
ಸೇನೆ ಕಾರ್ಯಾಚರಣೆ ಸಂದರ್ಭದಲ್ಲಿ ಜೆಇಎಂ ಕಮಾಂಡರ್ ಉಗ್ರನೊಬ್ಬನನ್ನು ಯೋಧರು ಸುತ್ತುವರೆದರೂ ಈ ಸಂದರ್ಭದಲ್ಲಿ ಅತ ಗುಂಡಿನ ದಾಳಿ ನಡೆಸಿದ ಪ್ರತಿಯಾಗಿ ಸೇನೆ ನಡೆಸಿದ ಗುಂಡಿಗೆ ಆತ ಬಲಿಯಾಗಿದ್ದಾನೆ ಎಂದು ಸೇನಾ ಮೂಲಗಳು ತಿಳಿಸಿವೆ. ಕಾರ್ಯಾಚರಣೆ ಸ್ಥಗಿತಗೊಂಡ ನಂತರ ನಡೆಸಿದ ಶೋಧ ಕಾರ್ಯದ ಸಂದರ್ಭದಲ್ಲಿ ಮತ್ತೊಬ್ಬ ಉಗ್ರನ ಶವ ದೊರೆತಿದ್ದು ಆತನನ್ನು ವಿಲಾಯತ್ ಆಹ್ಮದ್ ಎಂದು ಗುರುತಿಸಲಾಗಿದೆ.