ಬೆಂಗಳೂರು: ಆಂಬ್ಯುಲೆನ್ಸ್ ಸಿಗದೇ ಕೊರೊನಾದಿಂದ ಮೃತಪಟ್ಟ ತಾಯಿಯ ಮೃತದೇಹವನ್ನು ಮಗ ಆಟೋ ರಿಕ್ಷಾದಲ್ಲೇ ಸಾಗಿಸುತ್ತಿರುವ ದೃಶ್ಯವು ನಗರದ ನಾಯಂಡಳ್ಳಿ ಜಂಕ್ಷನ್ನಲ್ಲಿ ಕಂಡುಬಂದಿದೆ.
ಮಂಡ್ಯ ಮೂಲದ ಶಾರದಮ್ಮ ಎನ್ನುವ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರ ಮಗ ಶಿವಕುಮಾರ್ ಎನ್ನುವವರು ತಾಯಿಯನ್ನು ಉಳಿಸಿಕೊಳ್ಳಲು ಬೆಂಗಳೂರಿನ ಸಾಲು ಸಾಲು ಆಸ್ಪತ್ರೆಗೆ ತಿರುಗಿದ್ದಾರೆ. ಆದರೆ ಆಸ್ಪತ್ರೆಗಳು ಆಕ್ಸಿಜನ್ ಸಬೂಬು ಹೇಳಿ ವಾಪಾಸ್ ಕಳುಹಿಸಿದ್ದು, ಕೊನೆಗೆ ಖಾಸಗಿ ಆಸ್ಪತ್ರೆಯೊಂದಕ್ಕೆ ಹೋಗಿ ಪರೀಕ್ಷಿಸಿದಾಗ, ಶಾರದಮ್ಮ ಮೃತಪಟ್ಟಿದ್ದರು.
ಸೂಕ್ತ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಮೃತಪಟ್ಟ ತಾಯಿಯ ಮೃತದೇಹವನ್ನು ಮಂಡ್ಯದ ಮಳವಳ್ಳಿಗೆ ಸಾಗಿಸಲು ಆಂಬ್ಯುಲೆನ್ಸ್ ಗೆ ಯತ್ನಿಸಿದ್ದು, ಆದರೆ ಯಾವುದೇ ಆಂಬ್ಯುಲೆನ್ಸ್ ಇವರ ಸಹಾಯಕ್ಕೆ ಬರದಿದ್ದಲ್ಲಿ, ಶಿವಕುಮಾರ್ ಕೊನೆಗೆ ಆಟೋದಲ್ಲಿಯೇ ತಾಯಿಯ ದೇಹವನ್ನು ಸಾಗಿಸಿದ್ದಾರೆ. ನಾಯಂಡಳ್ಳಿ ಜಂಕ್ಷನ್ ಬಳಿ ಪೊಲೀಸ್ ತಪಾಸಣೆ ವೇಳೆ ಈ ಘಟನೆ ಬೆಳಕಿಗೆ ಬಂದಿದ್ದು, ಸದ್ಯ ಇದ್ದ ಪೊಲೀಸರು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಡಲು ಮುಂದಾಗಿದ್ದಾರೆ.