
ಮಂಗಳೂರು: ತಣ್ಣೀರುಬಾವಿ ಬೀಚ್ ಸಮೀಪ ನಡೆದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.




ಘಟನೆಯ ವಿವರಗಳ ಪ್ರಕಾರ, ಏಪ್ರಿಲ್ 13ರಂದು ಸೋಮವಾರಪೇಟೆಯ ಅಜಯ್ ಕೆ (29) ಅವರು ತಮ್ಮ ಸ್ನೇಹಿತರಾದ ರಮೇಶ್ ಹಾಗೂ ರಫೀಕ್ ಜೊತೆ ಹುಟ್ಟುಹಬ್ಬ ಆಚರಿಸಲು ಕಾರಿನಲ್ಲಿ ತಣ್ಣೀರುಬಾವಿ ಬೀಚ್ಗೆ ಬಂದಿದ್ದರು. ಬೆಳಗಿನ ಜಾವ ಸುಮಾರು 2.30ರ ಸುಮಾರಿಗೆ ದಾರಿ ತಪ್ಪಿ ಕಸಬಾ ಬೆಂಗ್ರೆ ಕಡೆಗೆ ತೆರಳಿದ ವೇಳೆ, ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಯುವಕರನ್ನು ವಿಳಾಸ ಕೇಳಲು ಕಾರು ನಿಲ್ಲಿಸಿದ್ದರು. ಈ ವೇಳೆ, ವಿಳಾಸ ತೋರಿಸುವುದಾಗಿ ಹೇಳಿದ ಆರೋಪಿಗಳು ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತು ಸ್ವಲ್ಪ ದೂರ ಹೋಗಿ ಕಾರನ್ನು ನಿಲ್ಲಿಸಲು ಹೇಳಿ, ತಮ್ಮ ಬಳಿ ಇದ್ದ ಸ್ಕ್ರೂಡ್ರೈವರ್ ತೋರಿಸಿ ಬೆದರಿಕೆ ಹಾಕಿದ್ದಾರೆ. ನಂತರ ಕಾರಿನ ಮುಂಭಾಗದ ಗ್ಲಾಸ್ಗೆ ಹಾನಿ ಮಾಡಿ, ಪೀಡಿತರ ಬಳಿಯಿದ್ದ ಟೈಟನ್ ವಾಚ್, ಪಾಸ್ಟ್ಟ್ರಾಕ್ ವಾಚ್, ನಗದು, ಗಿಂಬಲ್, ಪವರ್ ಬ್ಯಾಂಕ್ ಹಾಗೂ ಬ್ರಾಸ್ಲೆಟ್ ಸೇರಿ ಒಟ್ಟು ಸುಮಾರು ₹24,500 ಮೌಲ್ಯದ ವಸ್ತುಗಳನ್ನು ಸುಲಿಗೆ ಮಾಡಿದ್ದಾರೆ.
ಕಾರಿನ ಗ್ಲಾಸ್ ಹಾನಿಯಿಂದ ₹8,000 ನಷ್ಟ ಉಂಟಾಗಿದೆ. ಒಟ್ಟು ನಷ್ಟ ₹32,500 ಆಗಿದೆ.ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೆತ್ತಿಕೊಳ್ಳಲಾಯಿತು.ತನಿಖೆ ನಡೆಸಿದ ಪೊಲೀಸರು ಮೊಹಮ್ಮದ್ ಸಿನಾನ್ (24) ಮತ್ತು ಝಹೀರ್ ನಿಸಾರ್ (22) ಅವರನ್ನು ಕಸಬಾ ಬೆಂಗ್ರೆಯಲ್ಲಿ ಬಂಧಿಸಿ, ಅವರಿಂದ ಗಿಂಬಲ್ ಹಾಗೂ ಟೈಟನ್ ವಾಚ್ ಸೇರಿದಂತೆ ಸ್ಕ್ರೂಡ್ರೈವರ್ ವಶಪಡಿಸಿಕೊಂಡಿದ್ದಾರೆ.ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ಚಂದು ಹಾರೀಸ್ (33) ತಲೆಮರೆಸಿಕೊಂಡಿದ್ದು, ಏಪ್ರಿಲ್ 22ರಂದು ಬಂಧಿಸಲಾಗಿದೆ.
ಆತನಿಂದ ಉಳಿದ ವಸ್ತುಗಳಾದ ಸ್ಮಾರ್ಟ್ ವಾಚ್, ಪವರ್ ಬ್ಯಾಂಕ್ ಹಾಗೂ ಕೃತ್ಯಕ್ಕೆ ಬಳಸಿದ ಟಿವಿಎಸ್ ಅಪಾಚೆ ಬೈಕ್ ವಶಕ್ಕೆ ಪಡೆಯಲಾಗಿದೆ.ಚಂದು ಹಾರೀಸ್ ವಿರುದ್ಧ ಈಗಾಗಲೇ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಪಣಂಬೂರು ಠಾಣೆಯಲ್ಲಿ ರೌಡಿ ಪಟ್ಟಿಯಲ್ಲಿದ್ದಾನೆ. ಜೊತೆಗೆ, ಅವನ ವಿರುದ್ಧ ಮೂರು ವಾರಂಟ್ಗಳು ಬಾಕಿ ಇವೆ ಎಂದು ಪೊಲೀಸರು ತಿಳಿಸಿದ್ದಾರೆ.ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.







