ಬಂಟ್ವಾಳ, ಮಾ.22: ಮಸೀದಿ ವಿಚಾರಕ್ಕೆ ಸಂಬಂಧಿಸಿದ ಗಲಾಟೆಯ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರುಗಳ ಆಧಾರದಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.ಉಳ್ಳಾಲ ಸಜಿಪಪಡು ನಿವಾಸಿ ಅಬ್ದುಲ್ ನವಾಝ್ (42) ನೀಡಿದ ದೂರಿನಂತೆ, ತಲೆಮೊಗರು ಮಸೀದಿಯಿಂದ ವಾಪಸ್ಸಾಗುವ ವೇಳೆ ಶೌಕತ್, ಇಸಾಕ್, ಸಫಿಕ್, ಯಾಕೂಬ್, ಮಹಮ್ಮದ್ ಮುಸ್ತಫಾ, ನಾಸಿರ್ ಹಾಗೂ ನಿಝಾಲ್ ಸೇರಿ ಕೆಲವರು ಮಸೀದಿ ವಿಚಾರವಾಗಿ ತಕರಾರು ತೆಗೆದು ಅವ್ಯಾಚವಾಗಿ ನಿಂದಿಸಿ, ಕತ್ತಿ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ್ದಾರೆಂದು ಆರೋಪಿಸಲಾಗಿದೆ.

ಗಾಯಗೊಂಡ ಅಬ್ದುಲ್ ನವಾಝ್ ಮತ್ತು ದಾವೂದ್ ಅವರು ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂಬಂಧ ಅ.ಕ್ರ. 46/2026 ರಂತೆ ಪ್ರಕರಣ ದಾಖಲಿಸಲಾಗಿದೆ.ಇದಕ್ಕೆ ಪ್ರತಿಯಾಗಿ, ಅಬ್ದುಲ್ ಗಫೂರ್ (48) ನೀಡಿದ ದೂರಿನಂತೆ, ಯಾಕೂಬ್, ಶಫೀಕ್, ಇಸಾಕ್, ಸಫ್ವಾನ್ ಹಾಗೂ ಅಶ್ರಫ್ ಸಾಹೇಬ್ ಅವರು ತಲೆಮೊಗರು ಮಸೀದಿ ಬಳಿ ತಡೆದು ನಿಲ್ಲಿಸಿ ಅವ್ಯಾಚವಾಗಿ ಬೈದು, ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದರೆಂದು ದೂರಲಾಗಿದೆ.
ಗಾಯಗೊಂಡ ಗಫೂರ್ ಅವರು ಕೂಡ ಆಸ್ಪತ್ರೆಗೆ ದಾಖಲಾಗಿದ್ದು, ಈ ಕುರಿತು ಅ.ಕ್ರ. 47/2026 ರಂತೆ ಪ್ರಕರಣ ದಾಖಲಾಗಿದೆ.ಮತ್ತೊಂದು ಪ್ರಕರಣದಲ್ಲಿ, ಶೌಕತ್ ಆಲಿ (40) ನೀಡಿದ ದೂರಿನಂತೆ, ಅವರ ಅಂಗಡಿಗೆ ಬಂದ ದಾವೂದ್, ಜುಬೈರ್, ಸೈದುದ್ದೀನ್, ನವಾಜ್, ಗಫೂರ್, ಶರೀಪ್ ಹಾಗೂ ಆಶಿಕ್ ಮಸೀದಿ ವಿಚಾರದಲ್ಲಿ ತಕರಾರು ತೆಗೆದು ಹಲ್ಲೆ ನಡೆಸಿದ್ದು, ಗಲಾಟೆ ತಡೆಯಲು ಬಂದವರ ಮೇಲೂ ದಾಳಿ ಯತ್ನ ನಡೆಸಿದ್ದಾರೆ.
ಈ ವೇಳೆ ತಲವಾರಿನಿಂದ ಹಲ್ಲೆ ಯತ್ನಿಸಿ ಜೀವಬೆದರಿಕೆ ಒಡ್ಡಿದರೆಂದು ದೂರಲಾಗಿದೆ. ಈ ಸಂಬಂಧ ಅ.ಕ್ರ. 48/2026 ರಂತೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.ಘಟನೆಯಲ್ಲಿ ಗಾಯಗೊಂಡಿರುವ ಇತ್ತಂಡಗಳ ಸದಸ್ಯರು ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾರಿಗೂ ಪ್ರಾಣಾಪಾಯದ ಗಾಯಗಳಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳು ಬಿಡುಗಡೆಯಾದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.








