



ಒಡಿಶಾ: ಅನಕ್ಷರಸ್ಥ ವ್ಯಕ್ತಿಯೊಬ್ಬರು ತಮ್ಮ ಸೋದರಿಯ ಖಾತೆಯಲ್ಲಿದ್ದ 20 ಸಾವಿರ ರೂಪಾಯಿ ಹಣವನ್ನು ವಾಪಸ್ ಪಡೆಯುವುದಕ್ಕೆ ಆಕೆಯ ಹೂತ್ತಿದ್ದ ಶವವನ್ನು ಹೊರತೆಗೆದು ಅಸ್ಥಿಪಂಜರವನ್ನೇ ಬ್ಯಾಂಕ್ಗೆ ತಂದಂತಹ ವಿಚಿತ್ರವಾದ ಘಟನೆ ಒಡಿಶಾದಲ್ಲಿ ನಡೆದಿದೆ.
ಸೋದರಿಯ ಅಸ್ಥಿಪಂಜರವನ್ನೇ ಬ್ಯಾಂಕ್ಗೆ ತಂದಂತಹ ವ್ಯಕ್ತಿಯನ್ನು ಜೀತು(50) ಎಂದು ಗುರುತಿಸಲಾಗಿದೆ. 2 ತಿಂಗಳ ಹಿಂದೆ ಇವರ ಅಕ್ಕ ಕರ್ಲಾ (56) ಅನಾರೋಗ್ಯದಿಂದ ಮೃತಪಟ್ಟಿದ್ದು, ಇವರು ಜಾನುವಾರುಗಳನ್ನು ಮಾರಾಟ ಮಾಡಿ ಸಿಕ್ಕ ಹಣವನ್ನು ತಮ್ಮ ಬ್ಯಾಂಕ್ ಖಾತೆಯಲ್ಲಿ ಇರಿಸಿದ್ದರು. ಅವರಿಗೆ ಬೇರೆ ಯಾರು ಕಾನೂನುಬದ್ಧ ಉತ್ತರಾಧಿಕಾರಿ ಇಲ್ಲದೇ ಇರುವುದರಿಂದ ಸೋದರ ಜೀತು ಅವರು ಬ್ಯಾಂಕ್ಗೆ ಹೋಗಿ ತನ್ನ ಸೋದರಿಯ ಖಾತೆಯಲ್ಲಿರುವ ಹಣ ನೀಡುವಂತೆ ಕೇಳಿದ್ದಾರೆ. ಆದರೆ ಈ ಸಮಯದಲ್ಲಿ ಬ್ಯಾಂಕ್ ಅಧಿಕಾರಿಗಳು ತಮ್ಮ ಸೋದರಿಯ ಮರಣಪತ್ರ ಹಾಗೂ ಇತರ ಅಗತ್ಯ ದಾಖಲೆಗಳನ್ನು ನೀಡುವಂತೆ ಕೇಳಿದ್ದಾರೆ.
ಹಣ ಡ್ರಾ ಮಾಡುವುದಕ್ಕೆ ಬೇಕಾದ ಅಗತ್ಯವಾದ ದಾಖಲೆಗಳನ್ನು ಪಡೆಯುವುದಕ್ಕೆ ಸರಿಯಾದ ದಾಖಲೆಗಳನ್ನು ಒದಗಿಸುವುದಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಸಹೋದರಿ ಹೂತ್ತಿಟ್ಟ ಶವವನ್ನು ಮತ್ತೆ ಬಗೆದು ಮೇಲೆತ್ತಿ ಅಸ್ಥಿಪಂಜರವನ್ನು ತೆಗೆದುಕೊಂಡು ಹೆಗಲಮೇಲೆ ಹೊತ್ತುಕೊಂಡು ಬ್ಯಾಂಕ್ಗೆ ಬಂದಿದ್ದಾರೆ. ಇದನ್ನೂ ಕಂಡ ಬ್ಯಾಂಕ್ ಅಧಿಕಾರಿ ಗಾಬರಿಯಿಂದ ಪೊಲೀಸರಿಗೆ ಕರೆ ಮಾಡಿದ್ದಾರೆ.
ಇನ್ನು ಸ್ಥಳಕ್ಕೆ ದೌಡಯಿಸಿದ ಪೊಲೀಸರು ಮೃತ ಸೋದರಿಯ ಖಾತೆಯಲ್ಲಿದ್ದ ಹಣವನ್ನು ತೆಗೆಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಇತ್ತ ಮೃತದೇಹವನ್ನು ಪೊಲೀಸರ ಸಮ್ಮುಖದಲ್ಲೇ ಮತ್ತೆ ಸ್ಮಶಾನದಲ್ಲಿ ಹೂಳಲಾಯ್ತು. ಈ ನಡುವೆ ಬ್ಯಾಂಕ್ ಮೂಲಗಳ ಪ್ರಕಾರ, ಬ್ಯಾಂಕ್ ಖಾತೆಯ ಉತ್ತರಾಧಿಕಾರಿಯೂ ಸಾವನ್ನಪ್ಪಿದ್ದು ಹೀಗಾಗಿ ಈಗ ಜೀತು ಮಾತ್ರವೇ ಕರ್ಲಾ ಅವರ ಖಾತೆಯಲ್ಲಿರುವ ಹಣಕ್ಕೆ ವಾರಸುದಾರರಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.








