
ಬಂಟ್ವಾಳ : ತಾಲೂಕಿನಲ್ಲಿ ಶನಿವಾರ ಸಂಜೆ ಸುರಿದ ಗಾಳಿ-ಮಳೆಯ ನಡುವೆ ಸಂಭವಿಸಿದ ಸಿಡಿಲಿನ ಅಬ್ಬರಕ್ಕೆ ಎರಡು ಪ್ರಸಿದ್ಧ ದೇವಾಲಯಗಳು ಹಾನಿಗೊಳಗಾದ ಘಟನೆ ನಡೆದಿದೆ.

ಇತಿಹಾಸ ಪ್ರಸಿದ್ಧ ಕಾರಿಂಜೇಶ್ವರ ದೇವಸ್ಥಾನ ಹಾಗೂ ಮಣಿನಾಲ್ಕೂರು ಗ್ರಾಮದ ಇಳಿಯೂರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನಕ್ಕೆ ಸಿಡಿಲು ಬಡಿದ ಪರಿಣಾಮ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿರುವ ಸಾಧ್ಯತೆ ವ್ಯಕ್ತವಾಗಿದೆ.ಸಮುದ್ರ ಮಟ್ಟದಿಂದ ಸುಮಾರು 800 ಅಡಿ ಎತ್ತರದಲ್ಲಿರುವ ಕಾರಿಂಜೇಶ್ವರ ದೇವಸ್ಥಾನಕ್ಕೆ ಸಂಜೆ ಸುಮಾರು 5 ಗಂಟೆ ಸುಮಾರಿಗೆ ಸಿಡಿಲು ಅಪ್ಪಳಿಸಿದೆ ಎಂದು ತಿಳಿದುಬಂದಿದೆ. ಬೃಹತ್ ಬಂಡೆಯ ತುದಿಯಲ್ಲಿ ನೆಲೆಸಿರುವ ಈ ಪುರಾತನ ಕ್ಷೇತ್ರಕ್ಕೆ ಸಿಡಿಲು ಬಡಿದ ಸಂದರ್ಭ ದೇವಸ್ಥಾನದ ಒಳಭಾಗದಲ್ಲಾಗಲಿ, ಸುತ್ತಮುತ್ತಲಿನ ಪ್ರದೇಶದಲ್ಲಾಗಲಿ ಭಕ್ತರು ಅಥವಾ ಸಾರ್ವಜನಿಕರು ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.





ಇನ್ನೊಂದೆಡೆ, ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಇಳಿಯೂರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಗರ್ಭಗುಡಿ ಮೇಲ್ಭಾಗ ಹಾಗೂ ಪ್ರಾಕಾರ ಭಾಗಕ್ಕೂ ಸಿಡಿಲು ಬಡಿದಿದೆ. ಸಂಜೆ ಸುಮಾರು 4.30ರ ವೇಳೆಗೆ ಸುರಿದ ಭಾರೀ ಮಳೆ ಮತ್ತು ಗಾಳಿಯ ನಡುವೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.ಸಿಡಿಲಿನ ತೀವ್ರತೆಗೆ ದೇವಸ್ಥಾನದ ಗರ್ಭಗುಡಿ ಮೇಲ್ಭಾಗದ ಶಿಲಾ ಕಲ್ಲುಗಳು ಛಿದ್ರಗೊಂಡು ಕೆಳಗೆ ಬಿದ್ದಿದ್ದು, ದೇವಾಲಯದ ಪ್ರಮುಖ ಭಾಗಗಳಿಗೆ ಹಾನಿಯಾಗಿದೆ. ಸುಮಾರು ನಾಲ್ಕು ವರ್ಷಗಳ ಹಿಂದೆ ದೇವಸ್ಥಾನ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆದಿತ್ತು. ಇದೀಗ ಮತ್ತೆ ಗರ್ಭಗುಡಿ ಭಾಗದ ನವೀಕರಣ ಮತ್ತು ದುರಸ್ತಿ ಕಾರ್ಯ ಕೈಗೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ದೇವಸ್ಥಾನಕ್ಕೆ ಸಂಭವಿಸಿದ ಹಾನಿಯಿಂದ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.








