ಭಾರತೀಯ ಲೋಕ ಸೇವಾ ಆಯೋಗ (ಯುಪಿಎಸ್ಇ) ಪರೀಕ್ಷೆ ಬರೆಯುವವರಿಗೆ ತರಬೇತಿ ನೀಡಲು ರಾಜ್ಕುಮಾರ್ ಕುಟುಂಬದ ಅಕಾಡೆಮಿ ಆರಂಭಿಸಿದ್ದು, ಇದರಡಿಯಲ್ಲಿ ಸಾಕಷ್ಟು ಜನರು ಶಿಕ್ಷಣ ಪಡೆದಿದ್ದಾರೆ. ಕೊವಿಡ್ ಇರುವ ಕಾರಣ ಆನ್ಲೈನ್ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಹೀಗಿರುವಾಗಲೇ ರಾಜ್ ಕುಟುಂಬ ‘ರಾಜ್ಕುಮಾರ್ ಲರ್ನಿಂಗ್ ಆ್ಯಪ್’ ಪರಿಚಯಿಸಿದೆ.
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಗೆ ಮುಂದಾಗಿರುವ ಡಾ.ರಾಜ್ ಕುಟುಂಬ, ಆ್ಯಪ್ ರಿಲೀಸ್ ಮಾಡಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಆ್ಯಪ್ ಲೋಕಾರ್ಪಣೆ ಮಾಡಿದ್ದಾರೆ. ಆ್ಯಪ್ ಬಿಡುಗಡೆ ಮಾಡಿ ಬಳಿಕ ಮಾತನಾಡಿದ ಬಸವರಾಜ್ ಬೊಮ್ಮಾಯಿ, ‘ರಾಘಣ್ಣ ಅವರು ನನಗೆ ಅತ್ಯಂತ ಆತ್ಮೀಯ ವ್ಯಕ್ತಿ. ಚಿಕ್ಕ ವಯಸ್ಸಿನಿಂದಲೂ ಪರಿಚಯ. ಡಾ.ರಾಜ್ ಕುಟುಂಬದಿಂದ ಹುಬ್ಬಳ್ಳಿಗೆ ನಿಕಟ ಸಂಬಂಧ ಇರೋದು ರಾಘಣ್ಣನಿಗೆ ಮಾತ್ರ. ನನ್ನ ಅಮ್ಮನಿಗೆ ರಾಘಣ್ಣ ಅಂದ್ರೆ ಇಷ್ಟ. ಅಪ್ಪು, ಶಿವಣ್ಣ ಜತೆ ಬಹಳಷ್ಟು ಆತ್ಮೀಯತೆ ಇದೆ’ ಎಂದರು.
‘ಡಾ.ರಾಜ್ ಕುಮಾರ್ ಓರ್ವ ಸಾಧಕ. ಸಾಧಕನಿಗೆ ಸಾವು ಅಂತ್ಯ ಅಲ್ಲ ಎಂದು ಸ್ವಾಮಿ ವಿವೇಕಾನಂದ ಅವರು ಹೇಳಿದ್ದರು. ಸಾವಿನ ನಂತರವು ನಮ್ಮ ಬದುಕು ಇರಬೇಕು. ಇದು ಎಲ್ಲಾರಿಗೂ ಹೇಳುವ ಮಾತು. ಆಕಾಶದಲ್ಲಿರೋ ನಕ್ಷತ್ರ ಡಾ.ರಾಜ್ ಕುಮಾರ್. ಆಕಾಶದಲ್ಲಿ ಸಾಕಷ್ಟು ನಕ್ಷತ್ರಗಳಿರುತ್ತದೆ. ಅದಕ್ಕೆ ಹಲವಾರು ಹೆಸರುಗಳಿರುತ್ತದೆ. ನಾನು ಒಂದು ನಕ್ಷತ್ರದ ಹೆಸರು ಹೇಳುವುದು ಡಾ.ರಾಜ್ ಕುಮಾರ್. ಅತ್ಯಂತ ಸರಳವಾಗಿ ಇರಬೇಕೆಂದು ಅವರಿಂದ ಕಲಿಯಬೇಕು’, ಎಷ್ಟೋ ಜನ ಸ್ಟಾರ್ ಆಗಿದ್ರು ಅವರಷ್ಟು ವಿನಮ್ರತೆಗ ಬೇರೆಯವರಿಗಿಲ್ಲ. ಡಾ.ರಾಜ್ರಲ್ಲಿ ಮುಗ್ಧತೆ ಇತ್ತು. ಅವರು ಇವಾಗ ಹುಟ್ಟಿರೋ ಮಗು ತರ. ಡಾ.ರಾಜ್ ಕುಮಾರ್ ‘ಸ್ಟೂಡೆಂಟ್ ಫಾರ್ ಎವರ್’ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.